
ಮಹಾಲಿಂಗಪುರ: ಸಮೀಪದ ಚಿಮ್ಮಡ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷೆ ಬಂಗಾರೆವ್ವ ಜಾಲಿಕಟ್ಟಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಕಳೆದ ಐದು ವರ್ಷಗಳ ಕಾಲ ನಡೆದ ಸಿಹಿ ಕಹಿ ಘಟನೆಗಳನ್ನು ಸದಸ್ಯರು ಮೆಲುಕು ಹಾಕಿದರು. ತಮ್ಮ ಅವಧಿಯ ಕೊನೆಯ ಸಭೆ ಇದಾಗಿದ್ದರಿಂದ ಭಾವನಾತ್ಮಕವಾಗಿ ಸೇರಿದ್ದ ಸದಸ್ಯರೆಲ್ಲರೂ ಅಭಿಪ್ರಾಯ ಹಂಚಿಕೊಂಡರು.
ಸದಸ್ಯ ಗುರಲಿಂಗಪ್ಪ ಪೂಜಾರಿ ಮಾತನಾಡಿ, ಗ್ರಾಮದ ಅಭಿವೃದ್ಧಿಯಲ್ಲಿ ಪಕ್ಷಬೇಧ ಮರೆತು ಎಲ್ಲ ಸದಸ್ಯರು ನೀಡಿದ ಸಹಕಾರವನ್ನು ಸ್ಮರಿಸಿದರು.
ಸದಸ್ಯರಾದ ಆನಂದ ಕವಟಿ, ಮಹಾಲಿಂಗ ಮಾಯಣ್ಣವರ, ಮನೋಜ ಹಟ್ಟಿ ಮಾತನಾಡಿ, ಪರರ ಪಾಲಾಗಿದ್ದ ಗ್ರಾಮದ 20 ಎಕರೆ ಸರ್ಕಾರಿ ಗೋಮಾಳ ಜಾಗವನ್ನು ಮರಳಿ ಪಡೆಯಲು ಗ್ರಾಮದ ಪ್ರತಿಯೊಬ್ಬರು ಶ್ರಮ ವಹಿಸಿದ್ದನ್ನು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಒಂದು ತಿಂಗಳ ಕಾಲ ಬಯಲು ಶೌಚ ಮುಕ್ತಗೊಳಿಸಲು ಶ್ರಮಿಸಿದ ಘಟನೆಯನ್ನು ಶ್ಲಾಘಿಸಿದರು.
ಸದಸ್ಯರಾದ ಕೇಶವ ವಂದಾಲ, ಮೇಘಾ ಗಾಣಿಗೇರ, ಪರವ್ವ ಮಠಪತಿ ಮಾತನಾಡಿ, ಐದು ವರ್ಷಗಳ ಅವಧಿಯಲ್ಲಿಯೂ ತಮ್ಮ ವಾರ್ಡಿನಲ್ಲಿ ಹಲವು ಕಾಮಗಾರಿಗಳು ಕೈಗೊಳ್ಳಲು ಸಾಧ್ಯವಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಬಿರಾದಾರ, ರಮೇಶ ಮೇತ್ರಿ, ಚನ್ನಪ್ಪ ಪೂಜಾರಿ, ಕಾರ್ಯದರ್ಶಿ ರಘು ಬಜಂತ್ರಿ, ಸಹಾಯಕ ಎನ್.ಐ. ಮಠಪತಿ ಮಾತನಾಡಿದರು. ಉಪಾಧ್ಯಕ್ಷೆ ಪದ್ಮಾವತಿ ಭಜಂತ್ರಿ, ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.