ಬಾಗಲಕೋಟೆ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಪದ್ಮಶ್ರೀ ಪುರಸ್ಕೃತ ಪ್ರವಚನಕಾರ, ಮಹಾಲಿಂಗಪುರದ ಇಬ್ರಾಹಿಂ ಸುತಾರ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ನಕಲಿ ಖಾತೆ ಸೃಷ್ಟಿಸಿ ಸಂದೇಶ ಹರಿಯಬಿಡಲಾಗಿದೆ.
‘ಯಾವ ಭಾರತೀಯ ಮುಸಲ್ಮಾನರಿಗೂ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ತೊಂದರೆ ಇಲ್ಲ. ಸಮಾಜದಲ್ಲಿ ಸುಳ್ಳು ಸುದ್ದಿ ಯಾರೂ ಹಬ್ಬಿಸಬಾರದು. ನಾವೆಲ್ಲರೂ ಭಾರತೀಯರೇ‘ ಎಂದು ಕಾಯ್ದೆಯ ಪರವಾಗಿ ಬರೆದಿರುವ ಸಂದೇಶ ಹರಿಯಬಿಡಲಾಗಿದೆ.
ಈ ಸಂದೇಶಕ್ಕೆ ಪರ–ವಿರೋಧದ ಚರ್ಚೆ ಜೋರಾಗಿಯೇ ನಡೆದಿದೆ. ಕೆಲವರು ಇಬ್ರಾಹಿಂ ಸುತಾರ ಅವರಿಗೆ ಕರೆ ಮಾಡಿ ಕೇಳಿದ್ದಾರೆ. ಆಗ ಅಚ್ಚರಿಗೊಂಡ ಅವರು ಪರಿಶೀಲಿಸಿದಾಗ ಅವರ ಹೆಸರಿನಲ್ಲಿ ಫೇಸ್ಬುಕ್ ಖಾತೆ ಸೃಷ್ಟಿಯಾಗಿರುವುದು ಗೊತ್ತಾಗಿದೆ.
ಪೊಲೀಸರಿಗೆ ದೂರು:ಈ ಬಗ್ಗೆ ಇಬ್ರಾಹಿಂ ಸುತಾರ ಮಹಾಲಿಂಗಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ನಾನು ಫೇಸ್ಬುಕ್ ಖಾತೆಯನ್ನೇ ಹೊಂದಿಲ್ಲ. ಸಾಮಾಜಿಕ ಜಾಲ ತಾಣವನ್ನೂ ನಾನು ಬಳಸುವುದಿಲ್ಲ. ನನ್ನ ಬಳಿ ಕೀಪ್ಯಾಡ್ ಮೊಬೈಲ್ಫೋನ್ ಮಾತ್ರ ಇದೆ. ಯಾರೋ ಕಿಡಿಗೇಡಿಗಳು ನನ್ನ ಹೆಸರಿನ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಈ ರೀತಿಯ ವಿಷಯ ಹರಿಯಬಿಟ್ಟಿದ್ದಾರೆ. ನನಗೆ ರಾಜಕೀಯ ಗೊತ್ತಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ನನಗೆ ಸಂಪೂರ್ಣ ಗೊತ್ತಿಲ್ಲ. ಅಷ್ಟಕ್ಕೂ ಅದು ನನ್ನ ಫೇಸ್ಬುಕ್ ಖಾತೆಯಲ್ಲ’ ಎಂದು ಸ್ಪಷ್ಟನೆ ಕೂಡ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.