ಬಾಗಲಕೋಟೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಣಿ ಮಾಡಿಸಿದವರಿಗೆ ಕಾಂಗ್ರೆಸ್ ಬಹುಮಾನ ನೀಡಲು ಮುಂದಾಗಿದೆ. ಇದು ಚರ್ಚೆಗೆ ಗ್ರಾಸವಾಗಿದೆ.
ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಅಡಿ ಅತಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿಸುವ ಕಾರ್ಯಕರ್ತರಿಗೆ ಬಾದಾಮಿ ಹಾಗೂ ಗುಳೇದಗುಡ್ಡ ಬ್ಲಾಕ್ ಕಾಂಗ್ರೆಸ್ನಿಂದ ಬಹುಮಾನ ಪ್ರಕಟಿಸಲಾಗಿದೆ. ಮೊದಲ ಬಹುಮಾನ ಫ್ರಿಜ್, ಎರಡನೇ ಬಹುಮಾನ ಎಲ್ಇಡಿ ಟಿವಿ ಹಾಗೂ ಮೂರನೇ ಬಹುಮಾನವಾಗಿ ಮೊಬೈಲ್ಫೋನ್ ನೀಡಲಾಗುತ್ತಿದೆ.
ಇದು ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ. ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಸದಸ್ಯರನ್ನು ನೊಂದಾಯಿಸುವ ಗುರಿಯೊಂದಿಗೆ ಈ ಬಹುಮಾನ ಅಭಿಯಾನ ನಡೆಯುತ್ತಿದೆ. ಸದಸ್ಯತ್ವ ನೋಂದಣಿಗೆ ಮಾರ್ಚ್ 31 ಕೊನೆಯ ದಿನ. ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಎಂ.ರೇವಣ್ಣ ಜಿಲ್ಲೆಯಲ್ಲಿ ಸದಸ್ಯತ್ವ ನೋಂದಣಿ ಅಭಿಯಾನದ ಹೊಣೆ ಹೊತ್ತಿದ್ದಾರೆ.
ಬಹುಮಾನ ನೀಡಿಕೆಯನ್ನು ಸಮರ್ಥಿಸಿಕೊಂಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಈ ಕ್ರಮದಿಂದ ಕಾರ್ಯಕರ್ತರಲ್ಲಿ ಸದಸ್ಯತ್ವ ನೋಂದಣಿ ಬಗ್ಗೆ ಉತ್ಸಾಹ ಮೂಡಿಸಿದೆ. ಪಕ್ಷದ ಬಗ್ಗೆಯೂ ಶ್ರದ್ಧೆ ಮೂಡಿಸಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ನ ಈ ಅಭಿಯಾನವನ್ನು ಬಿಜೆಪಿ ಸಾಮಾಜಿಕ ಜಾಲ ತಾಣ ಘಟಕ ಟೀಕಿಸಿದೆ. ’137 ವರ್ಷಗಳ ಇತಿಹಾಸ, 65 ವರ್ಷಕ್ಕೂ ಹೆಚ್ಚು ಅವಧಿಗೆ ಅಧಿಕಾರ ನಡೆಸಿದ ಪಕ್ಷಕ್ಕೆ ಬಹುಮಾನ ನೀಡಿ ಸದಸ್ಯರನ್ನು ನೋಂದಣಿ ಮಾಡಿಸುವ ಸ್ಥಿತಿ ಬಂದಿದೆ’ ಎಂದು ಲೇವಡಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.