ಬಾದಾಮಿ: ಕಟ್ಟಕಡೆಯ ಮನುಷ್ಯನಿಗೂ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ತಹಶೀಲ್ದಾರ್ ಜೆ.ಬಿ. ಮಜ್ಜಗಿ ಹೇಳಿದರು.
ಮುಖ್ಯಮಂತ್ರಿ ಚಿನ್ನದ ಪದಕ ಪ್ರಶಸ್ತಿ ಪಡೆದ ಇಲ್ಲಿನ ಸಿಪಿಐ ರಮೇಶ ಹಾನಾಪೂರ ಮತ್ತು ಬಾಗಲಕೋಟೆ ಸಿಪಿಐ ವಿಜಯ ಮುರಗುಂಡಿ ಅವರಿಗೆ ಇಲ್ಲಿನ ಪೊಲೀಸ್ ವಸತಿ ಗೃಹ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕರು ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಿಪಿಐ ರಮೇಶ ಹಾನಾಪೂರ ಅವರು ತಾಲ್ಲೂಕಿನ ನೆರೆ ಪ್ರವಾಹ, ಕೋವಿಡ್ ಸಮಯದಲ್ಲಿ ಜನರ ಪ್ರಾಣ ರಕ್ಷಣೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಕೊಲೆ ಮತ್ತು ಕಳ್ಳತನ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಕಾರ್ಯ ಮಾಡಿದ ಅವರನ್ನು ಸರ್ಕಾರ ಗುರುತಿಸಿ ಪದಕ ನೀಡಿದೆ ಎಂದು ಬಾಗಲಕೋಟೆ ಡಿವೈಎಸ್ಪಿ ಪ್ರಭುಗೌಡ ಹಿರೇಹಳ್ಳಿ ಹೇಳಿದರು.
ಸರ್ಕಾರಿ ನೌಕರರು ಸಾರ್ವಜನಿಕವಾಗಿ ಉತ್ತಮ ಸೇವೆ ಸಲ್ಲಿಸಿದರೆ ಜನರು ನೆನಪಿಸಿಕೊಳ್ಳುವರು. ಸರ್ಕಾರವೂ ನಮ್ಮನ್ನು ಗುರುತಿಸುವುದು. ಇದೇ ನಮಗೆ ಸಂತಸ ಎಂದು ಹಿಂದಿನ ತಹಶೀಲ್ದಾರ್ ಸುಹಾಸ ಇಂಗಳೆ ಹೇಳಿದರು. ಮುಖ್ಯಮಂತ್ರಿ ಚಿನ್ನದ ಪದಕ ಪ್ರಶಸ್ತಿ ಪಡೆದ ಸಿಪಿಐ ರಮೇಶ ಹಾನಾಪೂರ ಮತ್ತು ಸಿಪಿಐ ವಿಜಯ ಮುರಗುಂಡಿ ಸನ್ಮಾನ ಪಡೆದು ಮಾತನಾಡಿದರು. ಪಿಎಸ್ಐ ನೇತ್ರಾವತಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಅಧ್ಯಕ್ಷ ಆರ್.ಎಫ್. ಬಾಗವಾನ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ನಾಗರಾಜ ಕಾಚಟ್ಟಿ, ಕಾನಿಪ ಅಧ್ಯಕ್ಷ ಮಹೇಶ ಭಿಕ್ಷಾವತಿಮಠ, ತಾಲ್ಲೂಕು ಪಂಚಾಯ್ತಿ ಇಒ ಮಲ್ಲಿಕಾರ್ಜುನ ಕಲಾದಗಿ, ಬೆಟಗೇರಿ ಪಿಎಸ್ಐ ಪ್ರಕಾಶ ಬಣಕಾರ, ಕೆರೂರ ಪಿಎಸ್ಐ ರಾಮಪ್ಪ ಜಲಗೇರಿ, ಗುಳೇದಗುಡ್ಡ ಪಿಎಸ್ಐ ಐ.ಎಂ. ದುಂಡಸಿ, ಪ್ರಕಾಶ ಪೂಜಾರ, ಮಂಜುನಾಥ ಹಗಲಗಾರ, ಜ್ಯೋತಿಗಿರೀಶ, ಎನ್.ಎಸ್. ಘಂಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.