ಬಾಗಲಕೋಟೆ: ಇಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ಉಪಾಹಾರಕ್ಕೆ ನೀಡಿದ ಲೆಮನ್ ರೈಸ್ ಹಳಸಿದೆ ಎಂದು ರೋಗಿಯೊಬ್ಬರು ಆರೋಪಿಸುವ ವಿಡಿಯೊ ವೈರಲ್ ಆಗಿದೆ.
ಅನ್ನ ಹಳಸಿದೆ ಎಂದು ಹೇಳುವ ಅವರು, ಜೊತೆಗಿದ್ದ ಕೆಲವರಿಂದಲೂ ಅದನ್ನ ಹೇಳಿಸುತ್ತಾರೆ. ವಿಡಿಯೊ ಮಾಡಿ ಹರಿಯಬಿಟ್ಟವರು ಪೊಲೀಸ್ ಕಾನ್ಸ್ಟೆಬಲ್ ಎಂದು ತಿಳಿದುಬಂದಿದೆ.
‘ಲೆಮನ್ ರೈಸ್ ತುಸು ಹೆಚ್ಚು ಹುಳಿ ಇದ್ದ ಕಾರಣ ಹಾಗೆ ಆರೋಪಿಸಿದ್ದರು. ಅವರಿಗಿಂತ ಮುಂಚೆ ಉಪಾಹಾರ ಸೇವಿಸಿದ್ದ 200ಕ್ಕೂ ಹೆಚ್ಚು ಮಂದಿ ಯಾವುದೇ ಆರೋಪ ಮಾಡಿರಲಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಅವರಿಗೆ ಉಪ್ಪಿಟ್ಟು ಮಾಡಿಸಿ ಕೊಡಲಾಯಿತು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ತಿಳಿಸಿದರು.
ಆರೋಪ ಸತ್ಯಕ್ಕೆ ದೂರ: ಲೆಮನ್ ರೈಸ್ ಹಳಸಿತ್ತು ಎಂಬ ಆರೋಪವನ್ನು ಪತ್ರಿಕಾಗೋಷ್ಠಿಯಲ್ಲಿ ನಿರಾಕರಿಸಿದ ಶಾಸಕ ವೀರಣ್ಣ ಚರಂತಿಮಠ, ವಿಷಯ ತಿಳಿಯುತ್ತಿದ್ದಂತೆಯೇ ನಾನು ಹಾಗೂ ಎಸ್ಪಿ ಲೋಕೇಶ ಜಗಲಾಸರ್ ಖುದ್ದಾಗಿ ಹೋಗಿ ಪರಿಶೀಲನೆ ನಡೆಸಿದ್ದೇವೆ. ಬೇಕಿದ್ದರೆ ನೀವು ಪತ್ರಕರ್ತರು ಬಂದು ಆ ಅನ್ನ ಪರಿಶೀಲಿಸಬಹುದು. ಅದು ಹೆಚ್ಚು ಹುಳಿಯಾಗಿತ್ತು ಹೊರತು ಹಳಸಿರಲಿಲ್ಲ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.