ಜಮಖಂಡಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಾಲ್ಲೂಕಿನ ಕೆ.ಡಿ.ಜಂಬಗಿಯಲ್ಲಿ ಗುರುವಾರ ಅಪ್ಪ ಹಾಗೂ ಮಲತಾಯಿಯನ್ನು ಮೊದಲ ಹೆಂಡತಿಯ ಇಬ್ಬರು ಮಕ್ಕಳು ಹಾಗೂ ಸಂಬಂಧಿಗಳು ಸೇರಿ ಹತ್ಯೆ ಮಾಡಿದ್ದಾರೆ.
ಗ್ರಾಮದ ಶಿದರಾಯ ಈರಪ್ಪ ಮಲ್ಲೇಶನವರ (52) ಹಾಗೂ ಎರಡನೇ ಪತ್ನಿ ಕಲಾವತಿ(42) ಕೊಲೆಯಾದವರು.
ಶಿದರಾಯನ ಮೊದಲ ಪತ್ನಿಯ ಮಕ್ಕಳಾದ ಗುರುಪಾದ, ಬಸಗೊಂಡ, ಸೊಸೆಯಂದಿರಾದ ಗೀತಾ, ರಾಜಶ್ರೀ ಮತ್ತು ಬೀಗರು ಮನೆಯ ನಾಲ್ವರು ಸೇರಿ ಕೊಡಲಿ, ಗುದ್ದಲಿಯಿಂದ ಹೊಡೆದು ಸಾಯಿಸಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ಪ್ರತ್ಯಕ್ಷದರ್ಶಿಗಳಾದ ಕಲಾವತಿ ಪುತ್ರ ಪ್ರವೀಣ ಹಾಗೂ ಅಮ್ಮ ಲಕ್ಷ್ಮಿಬಾಯಿ ಹೇಳಿಕೆ ಆಧರಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
20 ವರ್ಷಗಳ ಹಿಂದೆ ಶಿದರಾಯನ ಮೊದಲ ಹೆಂಡತಿ ತೀರಿಹೋಗಿದ್ದರು. ಬಳಿಕ ಎರಡನೇ ಮದುವೆಯಾಗಿದ್ದರು. ಮೊದಲ ಹೆಂಡತಿ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಮದುವೆ ಮಾಡಿ ತಲಾ 3 ಎಕರೆ ಜಮೀನನ್ನು ನೀಡಿ, ಪತ್ನಿ ಕಲಾವತಿ ಹಾಗೂ ಮಗ ಪ್ರವೀಣ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದರು.
ಗುರುವಾರ ಮಧ್ಯಾಹ್ನ 12 ಗಂಟೆಗೆ ಮನೆಗೆ ನುಗ್ಗಿದ ಶಿದರಾಯನ ಮೊದಲ ಪತ್ನಿಯ ಮಕ್ಕಳು ಹಾಗೂ ಸೊಸೆಯಂದಿರು ಶಿದರಾಯನನ್ನು ಹೊಡೆದಿದ್ದಾರೆ. ಅದನ್ನು ಬಿಡಿಸಲು ಬಂದ ಕಲಾವತಿಗೂ ಕೊಡಲಿಯಿಂದ ಹಲ್ಲೆ ಮಾಡಲಾಗಿದೆ. ಸಾವಿಗೀಡಾದ ತಂದೆಯ ಶವವನ್ನು ಕೊಂದವರೇ ವಾಹನದಲ್ಲಿ ಹಾಕಿಕೊಂಡು ಠಾಣೆಗೆ ತಂದಿದ್ದರು. ತೀವ್ರ ಗಾಯಗೊಂಡಿದ್ದ ಕಲಾವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ ಎಂದು ಸಾವಳಗಿ ಪೊಲೀಸರು ಮಾಹಿತಿ ನೀಡಿದರು.
ಸ್ಥಳಕ್ಕೆ ಡಿವೈಎಸ್ಪಿ ಆರ್.ಕೆ.ಪಾಟೀಲ್, ಸಿಪಿಐ ಮಹಾಂತೇಶ ಹೊಸಪೇಠ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.