
ರಾಂಪುರ: ಬಾಗಲಕೋಟೆ ತಾಲ್ಲೂಕಿನ ಶಿರೂರ ಹಾಗೂ ಬೆನಕಟ್ಟಿ ಗ್ರಾಮಗಳ ರೈತರ ಜಮೀನುಗಳಲ್ಲಿ ಬೆಳೆದು ನಿಂತಿರುವ ಹಿಂಗಾರು ಹಂಗಾಮಿನ ಕಡಲೆ, ಹಿಂಗಾರಿ ಜೋಳ ಹಾಗೂ ತೊಗರಿ ಬೆಳೆಗಳಿಗೆ ಅಂಟಿರುವ ರೋಗ ಮತ್ತು ಕೀಟ ಬಾಧೆಯ ಸಮೀಕ್ಷಾ ಕಾರ್ಯವನ್ನು ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಬುಧವಾರ ಕೈಗೊಳ್ಳಲಾಯಿತು.
ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಗುರುದತ್ತ ಹೆಗಡೆ ಹಾಗೂ ಕೃಷಿ ಅಧಿಕಾರಿ ಅಕ್ಷತಾ ಬೂದಿಹಾಳ ಎರಡೂ ಗ್ರಾಮಗಳ ಜಮೀನುಗಳಿಗೆ ತೆರಳಿ ಬೆಳೆಗಳಿಗೆ ತಗುಲಿರುವ ರೋಗ, ಕೀಟ ಬಾಧೆಯನ್ನು ಪರೀಕ್ಷಿಸಿ ಕೂಡಲೇ ಕೈಗೊಳ್ಳಬೇಕಾದ ಕ್ರಮಗಳನ್ನು ರೈತರಿಗೆ ತಿಳಿಸಿದರು.
ಕಡಲೆ ಬೆಳೆಯಲ್ಲಿ ಸೊರಗು ರೋಗ ಶೇ.5 ರಿಂದ 10 ರಷ್ಟು ಕಂಡು ಬಂದಿದ್ದು, ರೈತರು ಮುಂಜಾಗ್ರತಾ ಕ್ರಮವಾಗಿ ಟ್ರೈಕೋಡರ್ಮ ಹರ್ಜಿಯಾನಂ ಜೈವಿಕ ಪೀಡೆ ನಾಶಕವನ್ನು ಲೀಟರ್ ನೀರಿಗೆ 10 ಎಂ.ಎಲ್ ಅಥವಾ ವಿಟಾವಕ್ಷ ಪಾವರ್ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ 3 ಎಂ.ಎಲ್ ದ್ರಾವಣ ಸಿಂಪಡಣೆ ಮಾಡುವಂತೆ ಕೋರಿದ್ದಾರೆ.
ಹಿಂಗಾರಿ ಜೋಳದ ಬೆಳೆಯಲ್ಲಿ ಲದ್ದಿ(ಸೈನಿಕ)ಹುಳುವಿನ ಬಾಧೆ ಕಂಡು ಬಂದಿದ್ದು, ಕೂಡಲೇ ರೈತರು ಎಮೆಕ್ಟಿನ್ ಬೆಂಜೋಯೇಟ್ ಇಲ್ಲವೇ ಕೋರಾಜಿನ್ ಪ್ರತಿ ಲೀಟರಿಗೆ 0.3 ಎಂ.ಎಲ್ ಬಳಸಿ ಸಿಂಪರಣೆ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.