ಬಾಗಲಕೋಟೆ: ಇಲ್ಲಿನ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಭಾನುವಾರ ಆಕ್ಸಿಜನ್ ಕೊರತೆ ಎದುರಾಗಿದೆ. ಬಳ್ಳಾರಿಯಿಂದ ಆಕ್ಸಿಜನ್ ಖರೀದಿಸಲಾಗುತ್ತಿದೆ. ಅಲ್ಲಿನ ಘಟಕದಲ್ಲಿ ಪೈಪ್ ಲೈನ್ ಸಮಸ್ಯೆಯಾಗಿದ್ದರಿಂದ ಆಕ್ಸಿಜನ್ ಟ್ಯಾಂಕರ್ಗಳು ಇಲ್ಲಿಗೆ ತಲುಪಿಲ್ಲ. ಪರಿಣಾಮ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಮುಂದೆ ಪರಿಸ್ಥಿತಿ ಹೇಗೆ ಎನ್ನುವ ಚಿಂತೆ ವೈದ್ಯರನ್ನು ಕಾಡುತ್ತಿದೆ.
ಈ ಮಧ್ಯೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದ್ದು. ತೀವ್ರ ಉಸಿರಾಟದ ತೊಂದರೆ ಹೊಂದಿರುವ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಆಕ್ಸಿಜನ್ ಪೂರೈಕೆದಾರರೊಂದಿಗೆ ಜಿಲ್ಲಾಧಿಕಾರಿ ಮಾತುಕತೆ ನಡೆಸಿದ್ದು, ಸೋಮವಾರ ಪೂರೈಕೆಯಾಗುವ ನಿರೀಕ್ಷೆ ಇದೆ. ಜಿಲ್ಲಾಸ್ಪತ್ರೆಯ ಕೋವಿಡ್ ಘಟಕದಲ್ಲಿ 177 ಬೆಡ್ಗಳಲ್ಲಿ ಆಕ್ಸಿಜನ್ ವ್ಯವಸ್ಥೆಯಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಅಂದಾಜು 100 ರೋಗಿಗಳಿಗೆ ಆಕ್ಸಿಜನ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.
‘ತುರ್ತಾಗಿ ಆಕ್ಸಿಜನ್ ದೊರಕದಿದ್ದರೆ ರೋಗಿಗಳ ಸ್ಥಿತಿ ಗಂಭೀರವಾಗಲಿದೆ’ ಎಂದು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಕ್ಸಿಜನ್ ಪೂರೈಕೆ ಘಟಕದಲ್ಲಿನ ಸಮಸ್ಯೆಯಿಂದಾಗಿ ಕೊರತೆ ಉದ್ಭವಿಸಿದೆ. ಪೂರೈಕೆದಾರರೊಂದಿಗೆ ಮಾತುಕತೆ ನಡೆಸಿದ್ದೇನೆ. ಸೋಮವಾರ ಆಕ್ಸಿಜನ್ ಟ್ಯಾಂಕರ್ ಬರಲಿದೆ’ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.