ಗುಳೇದಗುಡ್ಡ: ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಕಾರಣ ರೋಗಿಗಳು ಚಿಕಿತ್ಸೆಗಾಗಿ ಪರದಾಡಬೇಕಾಗಿದೆ.
ಮೂವತ್ತು ಹಾಸಿಗೆಗಳ ಆಸ್ಪತ್ರೆಯಲ್ಲಿ ಹುದ್ದೆಗೆ ತಕ್ಕಷ್ಟು ವೈದ್ಯರು ಇಲ್ಲವಾಗಿದ್ದಾರೆ. ದಿನೇದಿನೇ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಇಲ್ಲವಾಗಿದೆ.
ಹಿರಿಯ ಮುಖ್ಯ ವೈದ್ಯಾಧಿಕಾರಿ, ಮಕ್ಕಳ ತಜ್ಞರು, ಅರವಳಿಕೆ ತಜ್ಞರು, ಹಿರಿಯ ಫಾರ್ಮಾಸಿಸ್ಟ್ ಹುದ್ದೆ ಖಾಲಿ ಇವೆ. ಕೇವಲ ಒಬ್ಬರೇ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.
11 ಡಿ ದರ್ಜೆ ಹುದ್ದೆಗಳಲ್ಲಿ 5 ಹುದ್ದೆ ಖಾಲಿ ಇವೆ. ಫೈಲೇರಿಯಾ ಘಟಕದಲ್ಲಿ 7 ಹುದ್ದೆ ಖಾಲಿ ಇವೆ. ಪ್ರತಿ ದಿನ 250–300 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. 8–10 ಮಂದಿ ಒಳರೋಗಿಗಳಾಗಿ ದಾಖಲಾಗುತ್ತಾರೆ. ತಿಂಗಳಿಗೆ 90–95 ಹೆರಿಗೆಗಳಾಗುತ್ತವೆ. ವಿಜಯಪುರ, ಬಾಗಲಕೋಟೆ, ಹುನಗುಂದ, ಇಳಕಲ್, ಕುಷ್ಟಗಿ, ಹಾನಗಲ್ನಿಂದಲೂ ರೋಗಿಗಳು ಬರುತ್ತಾರೆ. ಸರ್ಕಾರ ಕೂಡಲೇ ಆಸ್ಪತ್ರೆಗೆ ಹೆಚ್ಚು ವೈದ್ಯರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು ಎಂದು ರೋಗಿಗಳು ಒತ್ತಾಯಿಸುತ್ತಾರೆ.
’ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ಡಾ. ನಾಗರಾಜ ಕುರಿ ಒಬ್ಬರೇ ಇದ್ದರೂ ರೋಗಿಗಳನ್ನು ಪ್ರೀತಿಯಿಂದ ಕಾಣುತ್ತಾರೆ. ಎಲ್ಲರಿಗೂ ಚಿಕಿತ್ಸೆ ನೀಡುತ್ತಾರೆ’ ಎಂದು ಅಮೀನಗಡದ ಆಶಾ ಕಾರ್ಯಕರ್ತೆ ರೇಣುಕಾ ಹಡಪದ, ನಾಗರಾಳ ಗ್ರಾಮದ ರೇಣುಕಾ ಜಕ್ಕಪ್ಪನವರ ಹೇಳುತ್ತಾರೆ.
‘ರೋಗಿಗಳ ಸಂಖ್ಯೆಗೆ ತಕ್ಕಂತೆ ಆಸ್ಪತ್ರೆಯನ್ನು 100 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಬೇಕು. ಹೆಚ್ಚಿನ ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾಡಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಅವರಿಗೆ ಮನವಿ ಮಾಡಲಾಗಿದೆ ಎಂದು ಡಾ. ನಾಗರಾಜ ಕುರಿ ಹೇಳಿದರು.
ಖಾಲಿ ಇರುವ ಹುದ್ದೆಗಳಿಗೆ ಶೀಘ್ರ ನೇಮಕ ಮಾಡಬೇಕು ಎಂದು ಪುರಸಭೆ ಅಧ್ಯಕ್ಷ ಶಿವುಕುಮಾರ ಹಾದಿಮನಿ ಹಾಗೂ ಪ್ರಕಾಶ ಮುರಗೋಡ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.