ತೇರದಾಳ: ದೀಪಾವಳಿಗೆ ಲೋಕಾರ್ಪಣೆಗೊಳ್ಳಲಿರುವ ತೇರದಾಳ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ನೂತನ ದೇವಸ್ಥಾನದ ಚೌಕಟ್ಟಿಗೆ ಬನಹಟ್ಟಿಯ ಭಾರತಿ ರುದ್ರಪ್ಪ ಆಸಂಗಿ 47 ಕೆ.ಜಿ ಹಾಗೂ ಬಾಗಿಲಿಗೆ ಇಲ್ಲಿನ ಜಯಶ್ರೀ ಪಾರ್ಶ್ವನಾಥ ನಾಡಗೌಡ ಕುಟುಂಬದವರು 26 ಕೆ.ಜಿ ಬೆಳ್ಳಿಯನ್ನು ಶುಕ್ರವಾರ ಸಮರ್ಪಿಸಿದರು.
ದೇವಸ್ಥಾನದಲ್ಲಿ ಅರ್ಚಕ ಪರಯ್ಯ ತೆಳಗಿನಮನಿ ಅವರಿಂದ ಪ್ರಭುದೇವರ ಗದ್ದುಗೆಗೆ ವಿಶೇಷ ಪೂಜೆಹಾಗೂ ದೇಣಿಗೆ ನೀಡಿದವರಿಂದ ಆರತಿ, ಮಂಗಳಾರತಿ ಜರುಗಿದವು. ಈ ಸಂದರ್ಭದಲ್ಲಿ ಮಾತನಾಡಿದ ಹಿರೇಮಠದ ಗಂಗಾಧರ ದೇವರು, ‘12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ನಿರ್ಮಿಸಿದ ಅನುಭವ ಮಂಟಪದ ಪೀಠಾಧ್ಯಕ್ಷ ಅಲ್ಲಮಪ್ರಭುದೇವರು ನಮ್ಮೂರಿನ ಕ್ಷೇತ್ರಾಧಿಪತಿ ಆಗಿರುವುದು ನಮ್ಮೆಲ್ಲರ ಪುಣ್ಯ. ಅಂತಹ ಸತ್ಪುರುಷರಿಗೆ ಭಕ್ತಗಣ ಸೇರಿ ನೂತನ ದೇವಸ್ಥಾನ ನಿರ್ಮಿಸಿ, ಅದು ಪೂರ್ಣಗೊಳ್ಳುತ್ತಿರುವುದು ಐತಿಹಾಸಿಕ ಕ್ಷಣ. ಈ ಸಂದರ್ಭದಲ್ಲಿ ಭಕ್ತರು ಬೆಳ್ಳಿ ಬಾಗಿಲು ಹಾಗೂ ಚೌಕಟ್ಟನ್ನು ದೇಣಿಗೆಯಾಗಿ ಸಮರ್ಪಿಸುವ ಮೂಲಕ ಭಕ್ತಿಯನ್ನು ಮೆರೆದಿದ್ದಾರೆ’ ಎಂದು ಬಣ್ಣಿಸಿದರು.
ಪ್ರವೀಣ ನಾಡಗೌಡ ಮಾತನಾಡಿ, ‘ಪಟ್ಟಣದ ಹಿರಿಯರಾದ ಮಲ್ಲಪ್ಪಣ್ಣ ಜಮಖಂಡಿ ಹಾಗೂ ತರಕಾರಿ ಮಾರುವ ಚಂದ್ರವ್ವ ಜಗದಾಳ ಕೂಡ ಗರ್ಭ ಗುಡಿಗೆ ಬೆಳ್ಳಿಗೆ ಚೌಕಟ್ಟು ಹಾಗೂ ಬಾಗಿಲು ದೇಣಿಗೆ ನೀಡಿದ್ದಾರೆ. ದಾನ ಮಾಡುವುದರಲ್ಲಿನ ತೃಪ್ತಿ ಬಹಳ ದೊಡ್ಡದು’ ಎಂದರು.
ಗುಹೇಶ್ವರ ಪುರಾಣಿಕಮಠ, ವಿಜಯಮಹಾಂತೇಶ ನಾಡಗೌಡ, ಭೀಮಗೊಂಡ ಸದಲಗಿ, ಅಲ್ಲಯ್ಯ ದೊಡಮನಿ, ಸುನೀಲ ತೆಳಗಿನಮನಿ, ಮಲ್ಲಪ್ಪಣ್ಣ ಜಮಖಂಡಿ, ಈಶ್ವರ ಯಲ್ಲಟ್ಟಿ, ಶಂಕರ ಅಥಣಿ, ವರ್ಧಮಾನ ಕಡಹಟ್ಟಿ, ಶೇಖರ ಸಲಬನ್ನವರ, ಸತ್ಯಪ್ಪ ಮುಕುಂದ, ಗಿರೀಶ, ಶಿವಾನಂದ ವಾಲಿ, ಮಹಾದೇವ ಬಿಜ್ಜರಗಿ, ಗುಹೇಶ್ವರ ಬಾವಿ, ಆನಂದ ಹಿತ್ತಲಮನಿ, ಮಹಾವೀರ ಮಗದುಂ, ಮೃತ್ಯುಂಜಯ ತೆಳಗಿನಮನಿ, ಎಂ.ಸಿ. ಕುಂಚಕನೂರ, ಪ್ರಕಾಶ ಕಾಲತಿಪ್ಪಿ, ನುಚ್ಚಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.