
ಹುನಗುಂದ: ‘ಓದಿನಲ್ಲಿ ಆಸಕ್ತಿ, ನಿರಂತರ ಅಧ್ಯಯನ, ಪರೀಕ್ಷೆ ಬಗೆಗಿರುವ ಅನಗತ್ಯ ಭಯ ಮತ್ತು ಕೀಳರಿಮೆಯಿಂದ ಹೊರಬರಲು ಇಂಗ್ಲಿಷ್ ಕಠಿಣ ವಿಷಯ ಎಂಬುದನ್ನು ತಲೆಯಿಂದ ತೆಗೆದು ಹಾಕಬೇಕು. ಆಗ ಧನಾತ್ಮಕ ಭಾವವನ್ನು ರೂಢಿಸಿಕೊಂಡಾಗ ಮಾತ್ರ ನಿರೀಕ್ಷಿತ ಅಂಕ ಪಡೆಯಲು ಸಾಧ್ಯ’ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಪುಂಡಲಿಕ ಕಾಂಬಳೆ ಹೇಳಿದರು.
ಇಲ್ಲಿನ ವಿ.ಎಂ.ಎಸ್.ಆರ್.ವಿ ಪದವಿ ಪೂರ್ವ ಕಾಲೇಜಿನ ನೂತನ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗಾಗಿ ಶನಿವಾರ ಹಮ್ಮಿಕೊಂಡಿದ್ದ ಇಂಗ್ಲಿಷ್ ವಿಷಯದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪಿಯುಸಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಇಲಾಖೆ ಹಲವಾರು ಯೋಜನೆ ಹಾಕಿಕೊಂಡಿದ್ದು ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ನಿರ್ದೇಶಕ ಮಹಾಂತೇಶ ಕತ್ತಿ ಮಾತನಾಡಿ, ‘ಇಂಗ್ಲಿಷ್ ಮತ್ತು ಗಣಿತ ವಿಷಯಗಳ ಬಗ್ಗೆ ನಮಗಿರುವ ಪೂರ್ವಾಗ್ರಹಗಳೇ ನಮ್ಮ ಫಲಿತಾಂಶ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅಡ್ಡಿಯಾಗುತ್ತಿದ್ದು, ಅದನ್ನು ದೂರ ಮಾಡಲು ಇಂತಹ ಕಾರ್ಯಾಗಾರ ಸಹಾಯಕವಾಗಲಿವೆ’ ಎಂದು ತಿಳಿಸಿದರು.
ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಆರ್.ಗೋಲಗೊಂಡ, ಪ್ರಾಚಾರ್ಯ ಎಚ್.ಎಸ್.ಬೋಳಿಶೆಟ್ಟರ, ಶರಣಪ್ಪ ಹೂಲಗೇರಿ, ಬಿ ಆರ್.ಚೌಗಲೆ, ಉಪನ್ಯಾಸಕ ಎಂ.ಆರ್.ಕಾಂಬಳೆ, ಆಸೀಪ್ ಬದಾಮಿ, ನಿವೃತ್ತ ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ, ಎಂ.ಬಿ.ಸಾಲಾಪೂರ, ಬಿ.ಬಿ.ಕುದರಿಮನಿ, ಆರ್.ಎಂ.ಗೌಡರ, ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಉಪ ನಿರ್ದೇಶಕ ಪುಂಡಲಿಕ ಕಾಂಬಳೆ ಅವರನ್ನು ಕಾಲೇಜಿನ ಪರವಾಗಿ ಗೌರವಿಸಲಾಯಿತು. ಹುನಗುಂದ ಮತ್ತು ಕೂಡಲಸಂಗಮ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸೇವಂತಿ ಬೆಣಗಿ ಪ್ರಾರ್ಥಿಸಿದರು. ಪ್ರಾಚಾರ್ಯ ಎಚ್.ಎಸ್.ಬೋಳಿಶೆಟ್ಟರ ಸ್ವಾಗತಿಸಿದರು. ಶರಣಪ್ಪ ಹೂಲಗೇರಿ ಪ್ರಾಸ್ತಾವಿಕ ಮಾತನಾಡಿದರು. ಬಿ.ಆರ್.ಚೌಗಲೆ ವಂದಿಸಿದರು. ನಾಗರತ್ನ ಭಾವಿಕಟ್ಟಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.