
ಬಾಗಲಕೋಟೆ: ‘ವಿದ್ಯಾರ್ಥಿಗಳು ಅಧ್ಯಯನ ಮತ್ತು ಕ್ರಿಯಾತ್ಮಕ ವಿಚಾರಗಳಲ್ಲಿ ಸಮಯ ವಿನಿಯೋಗಿಸುವುದು ಅಗತ್ಯವಾಗಿದೆ. ಕ್ರಿಯಾತ್ಮಕ ವಿಚಾರಗಳಿಂದ ರ್ಯಾಗಿಂಗ್ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯವಿದೆ’ ಎಂದು ಭಾರತೀಯ ದಂತವೈದ್ಯಕೀಯ ಮಂಡಳಿ ಸದಸ್ಯ ಡಾ.ಶಿವಶರಣ ಶೆಟ್ಟಿ ಅಭಿಪ್ರಾಯಪಟ್ಟರು.
ಬಿ.ವಿ.ವಿ ಸಂಘದ ಪಿ.ಎಂ.ಎನ್.ಎಂ ದಂತ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ರ್ಯಾಗಿಂಗ್ ವಿರೋಧಿ ಅಭಿಯಾನ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿ ಬದುಕಿನಲ್ಲಿ ತಾನು ಏನು ಮಾಡಬೇಕು ಎಂದು ನಿರ್ಧರಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲೆಯೇ ಇದೆ. ಎಂದರು.
‘ನಿಮ್ಮ ವಿಚಾರಗಳು ಕ್ರಿಯಾತ್ಮಕವಾಗಿದ್ದು, ಹೊಸತನದಿಂದ ಕೂಡಿರಲಿ. ಹೊಸ ತಂತ್ರಜ್ಞಾನ ದಂತ ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಟ್ಟಿದೆ. ತಂತ್ರಜ್ಞಾನ ಬಳಸಿಕೊಂಡು ದಂತ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ ಮತ್ತು ಬದಲಾವಣೆ ಮಾಡಿ. ರೋಗಿಗಳಿಗೆ ಉತ್ತಮ ಸೇವೆ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಗಳಿರಲಿ’ ಎಂದು ಹೇಳಿದರು.
ಪ್ರಾಚಾರ್ಯ ಡಾ.ರವಿರಾಜ ದೇಸಾಯಿ ಮಾತನಾಡಿ, ‘ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿಗೆ ಕಾಲೇಜುಗಳಲ್ಲಿ ರ್ಯಾಗಿಂಗ್ ಮುಕ್ತ ವಾತಾವರಣದ ಅವಶ್ಯಕತೆ ಇದೆ. ಓದಿನತ್ತ ಹೆಚ್ಚಿನ ಗಮನ ಹರಿಸಬೇಕು’ ಎಂದರು.
ಕಾಲೇಜಿನ ಆ್ಯಂಟಿ ರ್ಯಾಗಿಂಗ್ ಸಮಿತಿ ನೋಡಲ್ ಅಧಿಕಾರಿ ಡಾ.ಕಾಶಿನಾಥ ಅರಬ್ಬಿ, ನವನಗರ ಸಿಪಿಐ ಅಶೋಕ ಚವ್ಹಾಣ, ಡಾ.ಸಿದ್ಧರಾಮ ಪಾಟೀಲ, ಡಾ.ನಿವೇದಿತಾ, ಡಾ.ವಿಜಯಲಕ್ಷ್ಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.