ಹುನಗುಂದ: ನಕಲಿ ಪಿಎಚ್ಡಿ ಹಾಗೂ ಅಂಗವಿಕಲ ಪ್ರಮಾಣ ಪತ್ರ ತಡೆಗೆ ಆಗ್ರಹಿಸಿ ಹುನಗುಂದ ಮತ್ತು ಇಳಕಲ್ ತಾಲ್ಲೂಕಿನ ಅರ್ಹತೆ ಹೊಂದಿದ ಅತಿಥಿ ಉಪನ್ಯಾಸಕರು ಪಟ್ಟಣದ ಸರ್ಕಾರಿ ಪ್ರಥಮ ಕಾಲೇಜಿನ ಪ್ರಾಚಾರ್ಯ ಸಿಕಂದರ್ ಧನ್ನೂರು ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಅತಿಥಿ ಉಪನ್ಯಾಸಕ ಈರಣ್ಣ ಹುರಳಿ ಮಾತನಾಡಿ, ‘2025-26ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪದವಿ ಕಾಲೇಜಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ಕಾಲೇಜು ಶಿಕ್ಷಣ ಇಲಾಖೆ ಯುಜಿಸಿ ವಿದ್ಯಾರ್ಹತೆ ಗಳಾದ ಕೆ- ಸೆಟ್/ ನೆಟ್/ಪಿಎಚ್ಡಿ ಹೊಂದಿರುವುದು ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಆದರೆ ಕೆಲವರು ಅಕ್ರಮವಾಗಿ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಿಂದ ನಕಲಿ ಪಿಎಚ್ಡಿ ಪ್ರಮಾಣ ಪತ್ರ ತರುತ್ತಿದ್ದಾರೆ. ಅಂಗವಿಕಲ ಪ್ರಮಾಣ ಪತ್ರ ಲಗತ್ತಿಸುವುದರಿಂದ 10 ಅಂಕಗಳು ಬರುತ್ತವೆ ಎಂಬ ದುರಾಸೆಯಿಂದ ನೂನ್ಯತೆ ಇಲ್ಲದಿದ್ದರೂ ನಕಲಿ ಅಂಗವಿಕಲ ಪ್ರಮಾಣ ಪತ್ರದಿಂದ ಉದ್ಯೋಗ ಪಡೆಯುತ್ತಿದ್ದಾರೆ ಎಂದು ದೂರಿದರು.
ಉನ್ನತ ಶಿಕ್ಷಣ ಇಲಾಖೆ ಇಂಥವರ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾನೂನಿನ ಮೊರೆ ಹೋಗಬೇಕಾಗುವುದು ಎಂದು ಎಚ್ಚರಿಸಿದರು.
ಅತಿಥಿ ಉಪನ್ಯಾಸಕರಾದ ಎಲ್. ಜಿ. ಗಗ್ಗರಿ, ಸಂತೋಷ ಕಾಳಣ್ಣವರ, ಅಮರೇಶ ಗೌಡರ, ಹನಮಪ್ಪ ಕೋರಿ, ಮೈಲಾರಪ್ಪ ಬಿಲ್ಕರ್, ಬಸಯ್ಯ ಮಠಪತಿ, ನಿರುಪಾದ್ ಗುಡಿಮನಿ, ರಾಘವೇಂದ್ರ ಜುಂಜ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.