ADVERTISEMENT

ತಿಮ್ಮಾಪುರ ವಿರುದ್ಧ ಸುಳ್ಳು ಆರೋಪ: ನಂಜಯ್ಯನಮಠ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 6:17 IST
Last Updated 3 ಫೆಬ್ರುವರಿ 2026, 6:17 IST
<div class="paragraphs"><p>ಎಸ್.ಜಿ.ನಂಜಯ್ಯನಮಠ</p></div>

ಎಸ್.ಜಿ.ನಂಜಯ್ಯನಮಠ

   

ಬಾಗಲಕೋಟೆ: ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೇ ದುರುದ್ದೇಶಪೂರಿತ ಆರೋಪ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ವಿರುದ್ಧ ಆರೋಪ ಮಾಡುವ ಪ್ರತಿಪಕ್ಷ ನಾಯಕ ಆರ್.ಅಶೋಕ ಹಿಂದೆ ಸಚಿವರಾಗಿದ್ದಾಗ ಅವರ ವಿರುದ್ಧ ಆರೋಪಗಳು ಬಂದಾಗ ರಾಜೀನಾಮೆ ಕೊಟ್ಟಿದ್ದರಾ? ಲಂಚ ಪಡೆದ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ತಾನು ತಪ್ಪಿಸಿಕೊಳ್ಳಲು ಸಚಿವರ ಹೆಸರು ಬಳಸಿಕೊಂಡಿದ್ದಾನೆ. ಅದಕ್ಕೆ ಸಚಿವರು ಹೇಗೆ ಕಾರಣರಾಗುತ್ತಾರೆ ಎಂದು ಪ್ರಶ್ನಿಸಿದರು.

ADVERTISEMENT

ತಿಮ್ಮಾಪುರ ಹಲವು ದಶಕಗಳಿಂದ ರಾಜಕಾರಣದಲ್ಲಿದ್ದಾರೆ. ಹಲವು ಬಾರಿ ಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ. ಸುಳ್ಳು ಆರೋಪ ಮಾಡುವುದನ್ನು ಬಿಜೆಪಿ ನಾಯಕರು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ ಮಾತನಾಡಿ, ಲಕ್ಷ್ಮೀನಾರಾಯಣ ಎನ್ನುವ ರೌಡಿ ಶೀಟರ್ ಮುಂದಿಟ್ಟುಕೊಂಡು ಸಚಿವ ತಿಮ್ಮಾಪುರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ಅವರ ತೇಜೊವಧೆ ಮಾಡಲಾಗುತ್ತಿದೆ. ಈ ಹಿಂದೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಸಚಿವರ ವಿರುದ್ಧ ಆರೋಪ ಮಾಡಿದ್ದರು. ಸಾಬೀತು ಮಾಡಲಾಗದೇ ಸುಮ್ಮನರಾದರು ಎಂದರು.

ಕಾಂಗ್ರೆಸ್ ಮುಖಂಡ ಉದಯಸಿಂಗ್ ಪಡತಾರೆ ಮಾತನಾಡಿ, ರಾಜಕಾರಣದಲ್ಲಿ ಟೀಕೆಗಳು ಆರೋಗ್ಯಕರವಾಗಿಬೇಕು. ಅಭಿವೃದ್ಧಿ ವಿಚಾರವಾಗಿ ಸಲಹೆಗಳನ್ನು ನೀಡಿದರೆ ಸ್ವೀಕರಿಸಬಹುದು. ವ್ಯಕ್ತಿಯ ಹೆಸರಿಗೆ ಕಳಂಕ ತರುವಂತೆ ಟೀಕೆ ಮಾಡಬಾರದು ಎಂದು ಹೇಳಿದರು.

ಮುಧೋಳ ಕ್ಷೇತ್ರದಲ್ಲಿ ರನ್ನ ಕಾರ್ಖಾನೆ ಮುಚ್ಚಿದರೂ ಅದನ್ನು ಪುನರಾರಂಭ ಮಾಡಲು ಹಿಂದಿನ ಸಚಿವರು ಯಾವುದೇ ಕೆಲಸ ಮಾಡಲಿಲ್ಲ. ಆದರೆ, ತಿಮ್ಮಾಪುರ ಕಾರ್ಖಾನೆ ಪುನರಾರಂಭಿಸಿ ರೈತರ ಹಿತ ರಕ್ಷಿಸಿದರು ಎಂದರು.

ಮುಖಂಡರಾದ ಎಸ್.ಪಿ.ದಾನಪ್ಪಗೋಳ, ಸಂಗಪ್ಪ ಇಂಬಣ್ಣವರ, ಲಕ್ಷ್ಮಣ ಮಾಲ‌ಗೇರಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.