
ಬೀಳಗಿ: ‘ಜಾತ್ರೆಗಳು ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವುದರ ಜೊತೆಗೆ ನಮ್ಮ ಬದುಕಿನ ಮೌಲ್ಯಗಳನ್ನು ತಿಳಿಸಿಕೊಡುತ್ತವೆ. ಈ ಕಾರಣದಿಂದಾಗಿ ನಾವೆಲ್ಲಾ ಒಂದಾಗಿ ಜಾತ್ರೆಗಳನ್ನು ಆಚರಿಸಬೇಕು‘ ಎಂದು ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ತೋಳಮಟ್ಟಿ ಗ್ರಾಮದ ಮಲ್ಲಿಕಾರ್ಜುನ ಜಾತ್ರಾಮಹೋತ್ಸವದ ನಿಮಿತ್ತ ನಡೆದ ರಥೋತ್ಸವ, ಬೀರದೇವರ ಪಲ್ಲಕ್ಕಿ ಉತ್ಸವ ಮತ್ತು ಸಿದ್ದಾರೂಡರ ನೂತನ ಮೂರ್ತಿ ಪ್ರತಿಷ್ಠಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಧರ್ಮ ಮತ್ತು ಸಮಾಜವನ್ನು ಮನುಷ್ಯ ಮಾತ್ರ ಕಟ್ಟಬಲ್ಲ. ಅದಕ್ಕಾಗಿ ಆತನಿಗೆ ಕೆಲವು ಸಾಮಾಜಿಕ ಮತ್ತು ಧಾರ್ಮಿಕ ಸದ್ಗುಣಗಳ ಅವಶ್ಯಕತೆಯಿದೆ. ಮನುಷ್ಯ ಜಾಗೃತನಾಗಿ ಧರ್ಮ ಮಾರ್ಗದಲ್ಲಿ ನಡೆದರೆ ಬದುಕು ದೀಪದಂತೆ ಪರಿಶುದ್ಧವಾಗುತ್ತದೆ ಎಂದರು.
ಬಿಲ್ ಕೆರೂರ ಬಿಲ್ವಾಶ್ರಮದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, 18 ವರ್ಷಗಳಿಂದ ನಿರಂತರವಾಗಿ ಮಲ್ಲಿಕಾರ್ಜುನ ಜಾತ್ರಾಮಹೋತ್ಸವ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಬೀಳಗಿಯ ಬ್ರಹನ್ಮಠ ಶಿವಾನಂದ ದೇವರು ಮಾತನಾಡಿದರು.
ಮುತ್ತತ್ತಿಯ ಗುರುಲಿಂಗ ಹೀರೇಮಠ ಶಿವಾಚಾರ್ಯ ಸ್ವಾಮೀಜಿ,ಕಲಾದಗಿ ಪಂಚಗ್ರಹ ಸಂಸ್ಥಾನ ಹಿರೇಮಠ ಗಂಗಾಧರ ಶಿವಾಚಾರ್ಯ ಸ್ವಾಮೀಜಿ,ಗದ್ದನಕೇರಿ ಮಳಿಯಪ್ಪಯ್ಯ ಸ್ವಾಮೀಜಿ ಭಾಗವಹಿಸಿದ್ದರು.
ಮುಂಜಾನೆ 10 ಘಂಟೆಗೆ ಸುಮಂಗಲೆಯರ ಆರತಿಗಳೊಂದಿಗೆ ಮತ್ತು ಕುಂಭ ವಾದ್ಯ ವೈಭವಗಳೊಂದಿಗೆ ಸಿದ್ದಾರೂಢರ ಮೂರ್ತಿ ಪ್ರತಿಷ್ಠಾಪಣೆ ಜರುಗಿತು. ನಂತರ ಸಂಜೆ 5.30 ಕ್ಕೆ ರಥೋತ್ಸವ ಜರುಗಿತು.
ಎಸ್.ಎಮ್.ಬೊಳರಡ್ಡಿ,ಸಂತೋಷ ಸಜ್ಜನ,ಎಸ್.ವಿ.ಸಜ್ಜನ,ಎಚ್.ಎಸ್. ಬಡಿಗೇರ,ಮಲ್ಲಪ್ಪ ಲುಲ್ಲಿ, ಗುರುನಾಥ ಹಿರೇಮಠ, ಬಸವರಾಜ ಬಾವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.