ADVERTISEMENT

ಬಾಗಲಕೋಟೆ | ಭ್ರೂಣಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 0:44 IST
Last Updated 3 ಜೂನ್ 2024, 0:44 IST
ಭ್ರೂಣಹತ್ಯೆ ಪ್ರಕರಣದ ಆರೋಪಿ ಕವಿತಾ ಬಾಡನವರ ಅವರನ್ನು ಮಹಾಲಿಂಗಪುರ ಪೊಲೀಸರು ಭಾನುವಾರ ವಿಚಾರಣೆಗೆ ಕರೆದೊಯ್ದರು
ಭ್ರೂಣಹತ್ಯೆ ಪ್ರಕರಣದ ಆರೋಪಿ ಕವಿತಾ ಬಾಡನವರ ಅವರನ್ನು ಮಹಾಲಿಂಗಪುರ ಪೊಲೀಸರು ಭಾನುವಾರ ವಿಚಾರಣೆಗೆ ಕರೆದೊಯ್ದರು   

ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ): ಭ್ರೂಣಹತ್ಯೆ ಪ್ರಕರಣದ ಆರೋಪಿಗಳಾದ ಕವಿತಾ ಬಾಡನವರ ಹಾಗೂ ಮೃತ ಸೋನಾಲಿ ಕದಮ್ ಅವರ ಸಹೋದರ ವಿಜಯ ಗೌಳಿ ಅವರನ್ನು ವಶಕ್ಕೆ ಪಡೆದಿರುವ ಪಟ್ಟಣದ ಪೊಲೀಸರು ಭಾನುವಾರ ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು.

ಬೆಳಿಗ್ಗೆಯೇ ಪೊಲೀಸ್ ಠಾಣೆಗೆ ವಿಜಯ ಗೌಳಿ ಅವರನ್ನು ಕರೆತಂದ ಸಿಪಿಐ ಸಂಜೀವ ಬಳೆಗಾರ ನೇತೃತ್ವದ ತಂಡ ಮಹಾರಾಷ್ಟ್ರದ ಜೈಸಿಂಗಪುರಕ್ಕೆ ಅವರನ್ನು ಕರೆದೊಯ್ದರು.  ಅಲ್ಲಿನ ವೈದ್ಯರೊಬ್ಬರು ಮಹಿಳೆಯನ್ನು ಸ್ಕ್ಯಾನಿಂಗ್ ಮಾಡಿ ಬಳಿಕ ಗರ್ಭಪಾತಕ್ಕೆ ಮಹಾಲಿಂಗಪುರದ ಕವಿತಾ ಅವರ ಮನೆಗೆ ಕಳುಹಿಸಿರುವ ಅನುಮಾನದ ಮೇಲೆ ಪೊಲೀಸರು ವಿಜಯ ಗೌಳಿ ಅವರನ್ನು ಜೈಸಿಂಗಪುರಕ್ಕೆ ಕರೆದೊಯ್ದು ವಿಚಾರಣೆ ನಡೆಸಿದರು.

ಇತ್ತ, ಪಿಎಸ್‌ಐ ಪ್ರವೀಣ ಬೀಳಗಿ ನೇತೃತ್ವದ ತಂಡವು ಕವಿತಾ ಬಾಡನವರ ಅವರನ್ನು ಅವರ ಮನೆಗೆ ಕರೆದೊಯ್ದು ಪಂಚನಾಮೆ ನಡೆಸಿತು. ಬಾಡನವರ ಮನೆಯಲ್ಲಿ ಗರ್ಭಪಾತ ನಡೆದಿರುವ ಕಾರಣ, ಬನಹಟ್ಟಿ ಪಿಎಸ್ಸೈ ಶಾಂತಾ ಹಳ್ಳಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಿ.ಎಂ. ವಜ್ಜರಮಟ್ಟಿ, ಕಾನ್‌ಸ್ಟೆಬಲ್‌ಗಳಾದ ರೂಪಾ ರಾಚನ್ನವರ, ರೇಣುಕಾ ಪಾಟೀಲ, ದೀಪಾ ಹುಲ್ಯಾಳ ಹಾಗೂ ಸಾಕ್ಷಿದಾರರ ಸಮ್ಮುಖದಲ್ಲಿ ಸ್ಥಳದ ಪಂಚನಾಮೆ ನಡೆಸಲಾಯಿತು.

ADVERTISEMENT

ಬಳಿಕ ಪೊಲೀಸ್ ಠಾಣೆಯಲ್ಲಿ ಈ ಇಬ್ಬರೂ ಆರೋಪಿಗಳ ಹೆಚ್ಚಿನ ವಿಚಾರಣೆಯನ್ನು ಡಿವೈಎಸ್‌ಪಿ ಇ. ಶಾಂತವೀರ ನೇತೃತ್ವದಲ್ಲಿ ನಡೆಸಲಾಯಿತು.

ಭ್ರೂಣಹತ್ಯೆ ಪ್ರಕರಣದ ಆರೋಪಿ ಕವಿತಾ ಬಾಡನವರ ಅವರನ್ನು ಗರ್ಭಪಾತ ನಡೆದಿರುವ ಮಹಾಲಿಂಗಪುರದ ಆಯಿಲ್‌ಮಿಲ್ ಪ್ಲಾಟ್‌ನಲ್ಲಿರುವ ಅವರ ಮನೆಗೆ ಭಾನುವಾರ ಕರೆದೊಯ್ದು ವಿಚಾರಣೆ ನಡೆಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.