
ಇಳಕಲ್: ‘ಕೃಷಿಕರ ಹಾಗೂ ಕರಕುಶಲ ಕರ್ಮಿಗಳ ಕಾಯಕ ಸಂಸ್ಕೃತಿಯಿಂದ ಜಾನಪದ ಜನ್ಮ ತಾಳಿದ್ದು, ನಗರದ ಮಕ್ಕಳಿಗೆ ಜಾನಪದ ಕಲೆ, ಹಾಡು, ಜನಜೀವನ ತಿಳಿಯುವ ಅವಕಾಶಗಳೇ ಇಲ್ಲವಾಗಿದೆ’ ಎಂದು ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು ಹೇಳಿದರು.
ನಗರದ ಜೇಸಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ‘ಹಳ್ಳಿ ಸೊಗಡು’ ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಜಾನಪದವು ಕೃಷಿ ಸಂಸ್ಕೃತಿಯೊಂದಿಗೆ ಮಿಳಿತವಾಗಿದೆ. ಇವತ್ತು ಕೃಷಿಯಿಂದ ದೂರವಾಗಿರುವ ನಗರವಾಸಿಗಳಿಗೆ ಜಾನಪದ ಕಲೆಗಳು, ಕೃಷಿ ಉಪಕರಣಗಳು, ಬೆಳೆಗಳ ಮಾಹಿತಿ ಕೂಡಾ ಇಲ್ಲವಾಗಿದೆ. ವಿದ್ಯಾರ್ಥಿಗಳಿಗೆ ಹಳ್ಳಿಯ ಸೊಗಡನ್ನು ತಿಳಿಸುವ ಈ ಕಾರ್ಯಕ್ರಮ ಚೆನ್ನಾಗಿ ಆಯೋಜಿಸಲಾಗಿದೆ’ ಎಂದರು.
ಶಿರೂರಿನ ಬಸವಲಿಂಗ ಶ್ರೀಗಳು ಮಾತನಾಡಿ, ‘ಶಿಕ್ಷಕರು ಪ್ರತಿ ವರ್ಗದ ಮಕ್ಕಳಿಂದ ಒಂದೊಂದು ಕಾಯಕವನ್ನು ರೂಢಿ ಮಾಡಿಸಿ, ಪ್ರದರ್ಶನ ಮಾಡಿಸಿದ್ದು ಶ್ಲಾಘನೀಯವಾದುದು. ಇಲ್ಲಿ ನಡೆದ ಜಾನಪದ ಬದುಕಿನ ಪ್ರದರ್ಶನವು ಅನೇಕ ವಿದ್ಯಾರ್ಥಿಗಳಿಗೆ ಆನಂದದ ಕಲಿಕೆಗೆ ಕಾರಣವಾಗಿದೆ’ ಎಂದರು.
ಜೇಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಣ್ಣ ಅಕ್ಕಿ, ಕಾರ್ಯದರ್ಶಿ ಅಶೋಕ ಶ್ಯಾವಿ, ಸದಸ್ಯರಾದ ಬಸವರಾಜ ಮಠದ, ಶಾಂತು ಸರಗಣಾಚಾರಿ, ಶ್ಯಾಮಸುಂದರ ಕರವಾ, ಸಂಗಣ್ಣ ಮುಳಗುಂದ, ರಾಜೇಂದ್ರ ಜುಂಜಾ, ಬಸವರಾಜ ಗೋಟುರ, ಶ್ರೀಕಾಂತ ಹೊಸಮನಿ, ಬಸವರಾಜ ನಾಲವಾಡದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.