ADVERTISEMENT

ಬಾಗಲಕೋಟೆ ಪೊಲೀಸ್ ಶ್ವಾನದಳಕ್ಕೆ ‘ಕ್ರಿಶ್’ ಸೇರ್ಪಡೆ

ಮೊದಲ ಬಾರಿಗೆ ಪೊಲೀಸ್ ಇಲಾಖೆಯಲ್ಲಿ ಮುಧೋಳ ತಳಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 10:37 IST
Last Updated 19 ಜನವರಿ 2021, 10:37 IST
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಇಲಾಖೆಗೆ ಸೇರ್ಪಡೆಯಾದ ಪುಟ್ಟ ನಾಯಿ ಮರಿ ‘ಕ್ರಿಶ್’ನನ್ನು ಎಸ್ಪಿ ಲೋಕೇಶ ಜಗಲಾಸರ್ ಪ್ರದರ್ಶಿಸಿದರು.
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಇಲಾಖೆಗೆ ಸೇರ್ಪಡೆಯಾದ ಪುಟ್ಟ ನಾಯಿ ಮರಿ ‘ಕ್ರಿಶ್’ನನ್ನು ಎಸ್ಪಿ ಲೋಕೇಶ ಜಗಲಾಸರ್ ಪ್ರದರ್ಶಿಸಿದರು.   

ಬಾಗಲಕೋಟೆ: ಭಾರತೀಯ ಸೇನೆ, ಅರೆ ಸೇನಾ ಪಡೆಗಳಲ್ಲಿ ತನ್ನದೇ ಛಾಪು ಮೂಡಿಸಿರುವ ಮುಧೋಳ ತಳಿ ನಾಯಿ ಇದೀಗ ಪೊಲೀಸ್ ಇಲಾಖೆಗೂ ಸೇರ್ಪಡೆಗೊಂಡಿದೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮುಧೋಳ ತಳಿ ನಾಯಿ ಬಳಕೆಗೆ ಸರ್ಕಾರ ಅನುಮತಿ ನೀಡಿದ್ದು, ಜನವರಿ 19ರಿಂದ 'ಕ್ರಿಶ್' ಹೆಸರಿನ 1.5 ತಿಂಗಳ ನಾಯಿ ಮರಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಶ್ವಾನದಳದ ಸದಸ್ಯನಾಗಿ ಅಧಿಕೃತವಾಗಿ ಸೇರ್ಪಡೆಯಾಗಿದೆ.

ಮುಧೋಳ ತಾಲ್ಲೂಕಿನ ತಿಮ್ಮಾಪುರದ ಶ್ವಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಮಹೇಶ ಕ್ರಿಶ್‌ನನ್ನು ಬಾಗಲಕೋಟೆ ಎಸ್ಪಿ ಲೋಕೇಶ ಜಗಲಾಸರ್ ಅವರಿಗೆ ಹಸ್ತಾಂತರಿಸಿದರು.

ADVERTISEMENT

ವರದಿ ನೀಡಲು ಸೂಚನೆ: ಶ್ವಾನ ದಳದಲ್ಲಿ ಮುಧೋಳ ತಳಿಯ ಕಾರ್ಯವೈಖರಿ ಗಮನಿಸಿ ನಂತರ ಬೇರೆ ಬೇರೆ ಜಿಲ್ಲೆಗೆ ನಿಯೋಜನೆ ಮಾಡಲು ನಿರ್ಧರಿಸಿರುವ ಗೃಹ ಇಲಾಖೆ ಮೊದಲ ಹಂತದಲ್ಲಿ ಬಾಗಲಕೋಟೆ ಜಿಲ್ಲೆಗೆ ಅವಕಾಶ ಮಾಡಿಕೊಟ್ಟಿದೆ.

ದೈನಂದಿನ ಕಾರ್ಯಚಟುವಟಿಕೆಯಲ್ಲಿ ಕ್ರಿಶ್‌ನ ಸ್ಪಂದನೆ ಗಮನಿಸಿ ಬಾಗಲಕೋಟೆ ಎಸ್ಪಿ ವರದಿ ಸಲ್ಲಿಸಲಿದ್ದಾರೆ.

ಕ್ರಿಶ್‌ಗೆ ಮೂರು ತಿಂಗಳು ತುಂಬುತ್ತಿದ್ದಂತೆಯೇ ಮೈಸೂರಿನ ಶ್ವಾನ ತರಬೇತಿ ಕೇಂದ್ರಕ್ಕೆ ಕಳುಹಿಸಲಾಗುವುದು. ಅಲ್ಲಿ ಒಂದು ವರ್ಷ ತರಬೇತಿ ಪಡೆದ ನಂತರ ಬಾಗಲಕೋಟೆಗೆ ಮರಳಲಿದ್ದಾನೆ ಎಂದು ಎಸ್ಪಿ ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ರಿಶ್‌ನನ್ನು ಅಪರಾಧ ಕಾರ್ಯ ಪತ್ತೆಗೆ ಬಳಕೆ ಮಾಡಿಕೊಳ್ಳಲಿದ್ದೇವೆ ಎಂದರು.

ಹೀರೋ ಬದಲಿಗೆ ಕ್ರಿಶ್: ಬಾಗಲಕೋಟೆ ಜಿಲ್ಲಾ ಶ್ವಾನ ದಳದಲ್ಲಿ ಐದು ನಾಯಿಗಳು ಇದ್ದು, ಇದರಲ್ಲಿ ಮೂರು ಲ್ಯಾಬ್ರಡಾರ್, ತಲಾ ಒಂದೊಂದು ಡಾಬರ್ ಮನ್ ಹಾಗೂ ಜರ್ಮನ್ ಶಫರ್ಡ್ ನಾಯಿಗಳು ಸೇರಿವೆ. ಕಳೆದ ತಿಂಗಳು ಲ್ಯಾಬ್ರಡಾರ್ ತಳಿಯ ನಾಯಿ 'ಹೀರೊ' ಸೇವಾ ನಿವೃತ್ತಿ ಹೊಂದಿದ್ದು, ಅವನ ಸ್ಥಾನಕ್ಕೆ ಕ್ರಿಶ್ ಸೇರ್ಪಡೆಗೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.