ಬೀಳಗಿ: ಜನಾಂಗೀಯ ದ್ವೇಷ, ಮಾನವರ ಮೇಲಿನ ದೌರ್ಜನ್ಯ ಹೋಗಲಾಡಿಸಲು ನಿರಂತರ ಹೋರಾಟ ಮಾಡಿದ ಮಹಾತ್ಮ ಗಾಂಧೀಜಿಯಂತಹ ಮಹಾನ್ ಚೇತನರ ಜಯಂತಿಗೆ ಕೇವಲ ಇಲಾಖೆಯ ಮುಖ್ಯಸ್ಥರು ಮಾತ್ರ ಸೇರಿದರೆ ಸಾಲದು ಸರ್ವ ಜನಾಂಗದ ಸಹಭಾಗಿತ್ವ ಮುಖ್ಯ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಸ್ಥಳೀಯ ಗಾಂಧೀಜಿ ವೃತ್ತದಲ್ಲಿ ಏರ್ಪಡಿಸಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ಬಹದ್ದೂರ್ ಶಾಸ್ತ್ರಿ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಮಹಾತ್ಮಾ ಎನಿಸಿಕೊಂಡ ಏಕೈಕ ವ್ಯಕ್ತಿ ಗಾಂಧೀಜಿ, ಅವರು ಪಂಚತತ್ವಗಳನ್ನು ಪಾಲಿಸುವುದನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಬಂದರು ಎಂದು ತಿಳಿಸಿದರು.
ಅತ್ಯಂತ ಪ್ರಾಮಾಣಿಕ ಪ್ರಧಾನಿಯಾಗಿದ್ದ ಶಾಸ್ತ್ರೀಜಿ ಆಹಾರ ಕೊರತೆ ನೀಗಿಸಲು ಪ್ರತಿ ಸೋಮವಾರ ಉಪವಾಸ ಮಾಡಲು ತಿಳಿಸಿದವರು. ಜೈ ಜವಾನ್ ಜೈ ಕಿಸಾನ್ ಮಂತ್ರದ ಮೂಲಕ ನಮಗೆಲ್ಲ ಸಂದೇಶ ಸಾರಿದರು ಎಂದರು.
ದಲಿತ ಸಂಘರ್ಷ ಸಮಿತಿಯ ಬೆಳಗಾವಿ ವಿಭಾಗದ ಸಂಚಾಲಕ ಮಾಹಾದೇವ ಹಾದಿಮನಿ ಮಾತನಾಡಿ ಗಾಂಧೀಜಿ ಮಾನವಿಯತೆಯ ಮಾಹಾಸಾಗರ ವಾಗಿದ್ದರು ಅವರ ತ್ಯಾಗದ ಪ್ರತೀಕ ಇಂದಿನ ಭಾರತದ ಸ್ವಾತಂತ್ರ್ಯ ಎಂದರು.
ಐದು ಜನ ಪೌರಕಾರ್ಮಿಕರಿಗೆ ಪ್ರತಿದಿನ ಉಪಯೋಗಿಸುವ ಕಿಟ್ಗಳನ್ನು ವಿತರಿಸಿದರು. ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ, ತಹಶೀಲ್ದಾರ್ ವಿನೋದ ಹತ್ತಳ್ಳಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ ಸ್ವಾಗತಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುತ್ತು ಬೊರ್ಜಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಸಿಪಿಐ ಹನಮಂತ ಸಣಮನಿ, ಇಒ ಶ್ರೀನಿವಾಸ ಪಾಟೀಲ, ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್.ಆದಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.