ADVERTISEMENT

ಲೋಕಾಪುರ: ₹ 12.60 ಲಕ್ಷ ಮೌಲ್ಯದ ಚಿನ್ನಾಭರಣ ವಶ, ಮೂವರು ಮನೆಗಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 6:54 IST
Last Updated 22 ಜೂನ್ 2021, 6:54 IST
ಮುಧೋಳ ತಾಲ್ಲೂಕಿನ ಲೋಕಾಪುರ ಪೊಲೀಸರು ಕಳ್ಳರಿಂದ ವಶಪಡಿಸಿಕೊಂಡ ಚಿನ್ನ, ಬೆಳ್ಳಿಯ ಆಭರಣ
ಮುಧೋಳ ತಾಲ್ಲೂಕಿನ ಲೋಕಾಪುರ ಪೊಲೀಸರು ಕಳ್ಳರಿಂದ ವಶಪಡಿಸಿಕೊಂಡ ಚಿನ್ನ, ಬೆಳ್ಳಿಯ ಆಭರಣ   

ಬಾಗಲಕೋಟೆ: ಮೂವರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿರುವ ಮುಧೋಳ ತಾಲ್ಲೂಕು ಲೋಕಾಪುರ ಠಾಣೆಯ ಪೊಲೀಸರು ಅವರಿಂದ ₹11,02 ಲಕ್ಷ ಮೌಲ್ಯದ 225 ಗ್ರಾಂ ಚಿನ್ನಾಭರಣ, ₹1,58 ಲಕ್ಷಮೌಲ್ಯದ 2260 ಗ್ರಾಂ ತೂಕದಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮುಧೋಳ ತಾಲ್ಲೂಕಿನ ಮಳಲಿ ಗ್ರಾಮದ ಸಿದ್ದು ಹಾದಿಮನಿ (ಜಿಮ್ಮಿ) ಕಲ್ಮೇಶ ರಾನವ್ವಗೋಳ (ಮಟ್ಯಾ) ಹಾಗೂ ಮುತ್ತಪ್ಪ ಪೂಜಾರಿ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೋಟಾರ್‌ಬೈಕ್ ಹಾಗೂ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕಳ್ಳತನದ ವಿವರ: ಕಳೆದ ಮೇ 25ರಂದು ನಸುಕಿನಲ್ಲಿ ಲೋಕಾಪುರದ ನಿವಾಸಿ ಶ್ರೀನಿವಾಸ ನಿಂಗನೂರ ಅವರ ಮನೆಯ ಹಿಂಭಾಗದಿಂದ ನಿಚ್ಚಣಕಿ (ಏಣಿ) ಸಹಾಯದಿಂದ ಒಳಗೆ ಪ್ರವೇಶಿಸಿದ್ದ ಕಳ್ಳರು ಮಲಗುವ ಕೋಣೆಯಲ್ಲಿದ್ದ ಟ್ರೆಜರಿ ತೆರೆದು ಅದರಲ್ಲಿ ಇಡಲಾಗಿದ್ದ ₹12,25 ಲಕ್ಷ ಮೌಲ್ಯದ 250 ಗ್ರಾಂ ಚಿನ್ನಾಭರಣ ಹಾಗೂ ₹1.26 ಲಕ್ಷ ಮೌಲ್ಯದ 1810 ಗ್ರಾಂ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ಶ್ರೀನಿವಾಸ ನಿಂಗನೂರು ಅದೇ ದಿನ ಸಂಜೆ ಲೋಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ADVERTISEMENT

ಪ್ರಕರಣ ತನಿಖೆಗೆ ಮುಧೋಳ ವೃತ್ತ ನಿರೀಕ್ಷಕ ಎಚ್.ಆರ್.ಪಾಟೀಲ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಕಳ್ಳತನ ಮಾಡಿದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.