
ಗುಳೇದಗುಡ್ಡ: ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಸಿಬ್ಬಂದಿ ಮುತುವರ್ಜಿ ವಹಿಸಿ ಕರವಸೂಲಾತಿ ವೇಗ ಹೆಚ್ಚಿಸಿ ಹೆಚ್ಚು ಕರವಸೂಲಾತಿ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ ಸೂಚಿಸಿದರು.
ಅವರು ಸೋಮವಾರ ತಾಲ್ಲೂಕಿನ ಮಂಗಳಗುಡ್ಡ, ನಾಗರಾಳ ಎಸ್ ಪಿ ,ಲಾಯದಗುಂದಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿ, ಕರ ವಸೂಲಿಯನ್ನು ಶೇಕಡಾವಾರು ಗುರಿ ಸಾಧನೆಗೆ ತಲುಪಿಸುವಂತೆ ಸೂಚನೆ ನೀಡಿದರು.
ಬಾಕಿದಾರರಿಗೆ ನೋಟಿಸ್ ಜಾರಿಗೊಳಿಸುವುದು, ಸಾರ್ವಜನಿಕ ಜಾಗೃತಿ ಮೂಡಿಸುವುದು ಹಾಗೂ ಪಾರದರ್ಶಕ ದಾಖಲೆ ವ್ಯವಸ್ಥೆ ಅನುಸರಿಸುವ ಕುರಿತು ಮಾರ್ಗದರ್ಶನ ನೀಡಿದ ಅವರು, ಮನೆಮನೆಗೆ ತೆರಳಿ ಕರ ವಸೂಲಿ ಕಾರ್ಯವಿಧಾನ, ದಾಖಲೆ ನಿರ್ವಹಣೆ ಹಾಗೂ ಬಾಕಿ ತೆರಿಗೆ ಸಂಗ್ರಹದ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಗ್ರಾಮದ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ತೆರಿಗೆ ಸಂಗ್ರಹ ಅತ್ಯಂತ ಮುಖ್ಯ. ಸಂಗ್ರಹಿಸಿದ ಹಣವನ್ನು ರಸ್ತೆ, ನೀರು, ಸ್ವಚ್ಛತೆ ಹಾಗೂ ಬೀದಿ ದೀಪಗಳ ನಿರ್ವಹಣೆಗೆ ಸಮರ್ಪಕವಾಗಿ ಬಳಸಬೇಕು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಬಡಿಗೇರ ಸಹಾಯಕ ನಿರ್ದೇಶಕ ರಾಮಚಂದ್ರ ಮೈತ್ರಿ, ಮಂಗಳಗುಡ್ಡ ಗ್ರಾಮ ಪಂಚಾಯಿತಿ ಪಿಡಿಒ , ಮಲ್ಲು ವಾರದ, ನಾಗರಾಳ ಎಸ್.ಪಿ, ಪಿಡಿಒ ಮಹಾಂತೇಶ ಕೋಟಿ, ಲಾಯದಗುಂದಿ ಗ್ರಾಪಂ ಪಿಡಿಒ ಗೋಪಾಲ ಕೃಷ್ಣ ನಾಯಕ, ಹಳದೂರ ಗ್ರಾಪಂ ಪಿಡಿಒ ಗೂಳಪ್ಪ ಹರದೊಳ್ಳಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಕರವಸೂಲಿಗಾರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.