
ಹಳ್ಳೂರ (ರಾಂಪುರ): ಬಾಗಲಕೋಟೆ ತಾಲ್ಲೂಕಿನಲ್ಲೇ ಅತ್ಯಂತ ದೊಡ್ಡ ಜಾತ್ರೆ ಎನ್ನಲಾದ ಹಳ್ಳೂರ ನಂದಿ ಬಸವಣ್ಣನ ರಥೋತ್ಸವ ಮಂಗಳವಾರ ಭಕ್ತ ಜನಸಾಗರದ ಮಧ್ಯೆ ವೈಭವದಿಂದ ಜರುಗಿತು.
ನಾಡಿನಾದ್ಯಂತ ಭಕ್ತರನ್ನು ಹೊಂದಿರುವ ಹಳ್ಳೂರ ಬಸವಣ್ಣನ ಜಾತ್ರೆ ಐದು ದಿನಗಳ ಕಾಲ ನಡೆಯಲಿದ್ದು, ರಥೋತ್ಸವದಲ್ಲಿ ಭಕ್ತ ಸಮೂಹ ಕಿಕ್ಕಿರಿದು ಸೇರಿತ್ತು.
ಚಕ್ಕಡಿ, ಟ್ರ್ಯಾಕ್ಟರ್, ಟಂಟಂ, ಕಾರು ಮತ್ತಿತರ ವಾಹನಗಳಲ್ಲಿ ಆಗಮಿಸಿದ್ದ ಜನಸ್ತೋಮ ದೇವಸ್ಥಾನದ ಮುಂಬಾಗಿಲಿನಿಂದ ಸಾಗಿಬಂದ ರಥಕ್ಕೆ ಹಣ್ಣು, ಕಾಯಿ, ಉತ್ತತ್ತಿ, ಬೆಂಡು, ಬತ್ತಾಸು ಎಸೆದು ಭಕ್ತಿಯ ಹರಕೆ ತೀರಿಸಿದರಲ್ಲದೇ, ಬಸವೇಶ್ವರ ಮಹಾರಾಜಕೀ ಜೈ ಎಂಬ ಘೋಷಣೆ ಮೊಳಗಿಸಿದರು.
ಬೆಳಿಗ್ಗೆ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ- ನೀಲಾಂಬಿಕೆ ಅಕ್ಷತಾರೋಪಣ ಕಾರ್ಯಕ್ರಮ ಜರುಗಿತು. ನಂತರ ಬಸವಣ್ಣನ ಮೂರ್ತಿಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಬೆಳಿಗ್ಗೆ 8 ಗಂಟೆಯಿಂದ ರಥದ ಕಳಸದ ಉತ್ಸವ ಜರುಗಿತು. ಸೋಮವಾರ ರಾತ್ರಿಯಿಂದ ಬೆಳಗಿನವರೆಗೆ ಬಾಸಿಂಗೋತ್ಸವ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.