
ಹುನಗುಂದ : ಗ್ರಾಮದ ರಸ್ತೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಚಿಕ್ಕಬಾದವಾಡಗಿ ಗ್ರಾಮಸ್ಥರು ಮಂಗಳವಾರ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಮೂಲಕ ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮದ ಬಸವರಾಜ ಹೊರಕೇರಿ ಹಾಗೂ ಪರನಗೌಡ ಪಾಟೀಲ ಮಾತನಾಡಿ, ಹುನಗುಂದದಿಂದ ಚಿತ್ತವಾಡಗಿಗೆ ಹೋಗುವ ಮಾರ್ಗದಲ್ಲಿ ಚಿಕ್ಕಬಾದವಾಡಗಿ ಕ್ರಾಸ್ ದಿಂದ ಗ್ರಾಮಕ್ಕೆ ₹20 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕಳೆದ 20 ವರ್ಷಗಳಿಂದಲೂ ಗ್ರಾಮಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಲು ಆಗಮಿಸಿದ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರನ್ನು ಗ್ರಾಮಕ್ಕೆ ಆಗಮಿಸಬೇಕು ಎಂದಾಗ ತಹಶೀಲ್ದಾರ್ ಎತ್ತಿನ ಬಂಡಿಯಲ್ಲಿ ಗ್ರಾಮಕ್ಕೆ ಆಗಮಿಸಿದರು.
ತಹಶೀಲ್ದಾರ್ ಅವರು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯ್ತಿ ರಾಜ್ಯ ಇಲಾಖೆ ಎಇಇ ಕೃಷ್ಣಾ ನಾಯಕ ಅವರಿಂದ ರಸ್ತೆ ಕಾಮಗಾರಿ ಬಗ್ಗೆ ಮಾಹಿತಿ ಪಡೆದರು. ನಂತರ ರಸ್ತೆ ಕಾಮಗಾರಿಗೆ ತಡೆ ಒಡ್ಡಿದ್ದ ಜಮೀನಿನ ಮಾಲೀಕ ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಜಮೀನಿನ ಮಾಲೀಕ ಹಾಗೂ ಗ್ರಾಮಸ್ಥರು ನಡುವೆ ಚರ್ಚೆ ನಡೆಸುವಾಗ ಮಾತಿನ ಚಕಮಿಕಿ ನಡೆದು ಕೆಲ ಸಮಯ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಎತ್ತಿನ ಬಂಡಿ, ಟ್ರ್ಯಾಕ್ಟರ್ ಹಾಗೂ ಮುಳ್ಳು ಕಂಟಿಯನ್ನಿಟ್ಟು ಗ್ರಾಮದಿಂದ ಹೋಗದಂತೆ ಪ್ರತಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು.
ನಂತರ ರಸ್ತೆಗೆ ಜಮೀನು ಕಳೆದುಕೊಂಡ ಎಲ್ಲ ಕೃಷಿ ಭೂಮಿಯನ್ನು ಸರ್ವೇ ಮಾಡಿ ಸ್ವಾಧೀನಕ್ಕೆ ಪಡಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯ್ತಿ ರಾಜ್ಯ ಇಲಾಖೆ ಎಇಇ ತಹಶೀಲ್ದಾರ್ ಸೂಚಿಸಿದರು.
ಸಂಗಪ್ಪ ಗೋಡಿ, ಸಂಗಣಬಸಪ್ಪ ಉಪನಾಳ, ಮಹದೇವಪ್ಪ ವಂದಾಲ, ಸಿಂಗಾರಿಗೌಡ ಪಾಟೀಲ, ಅಮರವ್ವ ಮಾಲಕಪ್ಪನವರ, ಸಿದ್ದವ್ವ ಲಗಳಿ, ರೂಪಾ ಗೌಡರ, ಬಸವ್ವ ಲಗಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.