ಹುನಗುಂದ: ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರೈತರಿಂದ ತೊಗರಿ ಖರೀದಿ ಮಾಡಿ ತಿಂಗಳು ಕಳೆದರೂ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಹೀಗಾಗಿ ರೈತರು ನಿರೀಕ್ಷೆಯಲ್ಲಿ ದಿನ ದೂಡುವಂತಾಗಿದೆ.
ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್ ತೊಗರಿಗೆ ₹7,550 ಹಾಗೂ ರಾಜ್ಯ ಸರ್ಕಾರ ₹450 ಪ್ರೋತ್ಸಾಹ ಧನ ನೀಡುತ್ತಿದ್ದು. ಒಟ್ಟಾರೆ ಕ್ವಿಂಟಲ್ಗೆ ₹8,000 ನಿಗದಿ ಪಡಿಸಿದೆ. ಒಬ್ಬ ರೈತನಿಂದ ಎಕರೆಗೆ 4 ಕ್ವಿಂಟಲ್ ಗರಿಷ್ಠ 40 ಕ್ವಿಂಟಲ್ ತೊಗರಿ ಮಾತ್ರ ಖರೀದಿಗೆ ಅವಕಾಶವಿದೆ. ಹುನಗುಂದ ಮತ್ತು ಇಳಕಲ್ ಉಭಯ ತಾಲ್ಲೂಕುಗಳಲ್ಲಿ ಒಟ್ಟು 10 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಕಳೆದ ಒಂದೂವರೆ ತಿಂಗಳಿಂದ ಮಾರುಕಟ್ಟೆಯಲ್ಲಿ ಕ್ವಿಂಟಲ್ ತೊಗರಿ ದರ ₹7,000ದ ಆಸುಪಾಸಿನಲ್ಲಿದೆ. ಹೀಗಾಗಿ ರೈತರು ಬೆಂಬಲ ಬೆಲೆ ಅಡಿ ತೊಗರಿ ಮಾರಾಟ ಮಾಡಿದ್ದಾರೆ. ಪ್ರತಿ ಬಾರಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿದ ತಿಂಗಳೊಳಗೆ ರೈತರ ಖಾತೆಗೆ ಹಣ ಜಮೆಯಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ಬಾರಿ ಹಾಗೆ ಆಗಿಲ್ಲ.
ಹುನಗುಂದ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಬೆಂಬಲ ಬೆಲೆಯಲ್ಲಿ ತೊಗರಿ ಕೇಂದ್ರದಲ್ಲಿ ಮಾರಾಟ ಮಾಡಲು ಪಟ್ಟಣದ ಟಿಎಪಿಸಿಎಂಎಸ್ ನಲ್ಲಿ 850 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಮಾರ್ಚ್ 15ರ ವರೆಗೆ ನೋಂದಣಿಗೆ ಅವಕಾಶವಿದೆ. ಫೆ.10ರಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಆರಂಭಿಸಲಾಗಿದೆ. ಈಗಾಗಲೇ 350 ರೈತರಿಂದ 10,500 ಕ್ವಿಂಟಲ್ ಖರೀದಿಸಲಾಗಿದೆ.
ಪ್ರಸಕ್ತ ವರ್ಷ ಹುನಗುಂದ ಮತ್ತು ಇಳಕಲ್ ತಾಲ್ಲೂಕುಗಳಲ್ಲಿ ದಾಖಲೆ ಪ್ರಮಾಣದಲ್ಲಿ, ಅಂದರೆ ಒಟ್ಟು 34,321 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು.
‘ಬೀಜ, ಗೊಬ್ಬರ, ಕೀಟನಾಶಕ, ಕಾರ್ಮಿಕರು ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗೆ ಸಾಲ ಮಾಡಿ ತೊಗರಿ ಬೆಳೆದಿದ್ದೇವೆ. ಮಾರಾಟ ಮಾಡಿ ತಿಂಗಳು ಕಳೆದರೂ ಹಣ ಜಮೆಯಾಗಿಲ್ಲ. ಹೀಗಾದರೆ ರೈತರು ದೈನಂದಿನ ಜೀವನ ಸಾಗಿಸುವುದಾರೂ ಹೇಗೆ’ ಎಂದು ಚಿತ್ತವಾಡಗಿ ಗ್ರಾಮದ ರೈತ ಸಂಗನಗೌಡ ಭಾವಿಕಟ್ಟಿ ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.