ಹುನಗುಂದ: ತಾಲ್ಲೂಕಿನಾಧ್ಯಂತ ಕಳೆದ ಎರಡು ಮೂರು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದ ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿಸಿದೆ.
ಜೂನ್ ಮೂರನೆಯ ವಾರದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ತಾಲ್ಲೂಕಿನ ಹುನಗುಂದ, ಅಮೀನಗಡ,ಕರಡಿ ಮತ್ತು ಇಳಕಲ್ ಹೋಬಳಿಗಳ ವ್ಯಾಪ್ತಿಯಲ್ಲಿ ಹೆಸರು, ಸೂರ್ಯಕಾಂತಿ, ತೊಗರಿ, ಸಜ್ಜೆ, ಉಳ್ಳಾಗಡ್ಡಿ, ಮುಸುಕಿನ ಜೋಳ, ಸೇರಿದಂತೆ ವಿವಿಧ ಬೀಜಗಳ ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ಈಗಾಗಲೇ ಬಿತ್ತನೆ ಮಾಡಿದ ಬೆಳೆಗೆ ಜಿಟಿಜಿಟಿ ಮಳೆ ಅನಕೂಲಕರವಾಗಿ ಪರಿಣಮಿಸಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಬಿತ್ತನೆ ಕಾರ್ಯ ಜೋರಾಗಿ ನಡೆದಿತ್ತು. ಆದರೆ ನಿರಂತರವಾಗಿ ಎರಡು ಮೂರು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಜಮೀನಿನಲ್ಲಿ ತೇವಾವಂಶ ಹೆಚ್ಚಾಗಿ ಬಿತ್ತನೆ ಕಾರ್ಯಕ್ಕೆ ಕೆಲಸಮಯ ತಡೆಯೊಡ್ಡಿದೆ. ಮಳೆಯ ಜತಗೆ ಬಿಸಲು,ಗಾಳಿಯ ಜೋರಾಗಿದೆ.
ಲಾಕ್ಡೌನ್ ನಡುವೆಯೂ ರೈತಾಪಿ ವರ್ಗವು ಸಮೀಪದ ರೈತ ಸಂಪರ್ಕ ಕೇಂದ್ರಗಳತ್ತ ಧಾವಿಸಿ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ. ಹುನಗುಂದ ಮತ್ತು ಇಳಕಲ್ ತಾಲ್ಲೂಕಿನಲ್ಲಿ ಶುಕ್ರವಾರವು ಸಾಮಾನ್ಯ ಮಳೆ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ಹುನಗುಂದ ತಾಲ್ಲೂಕಿನಾದ್ಯಂತ 1 ಸೆಂ.ಮೀ ಮಳೆ ಬಿದ್ದಿದೆ. ಹುನಗುಂದ ತಾಲ್ಲೂಕಿನ ಅಮೀನಗಡ ಹೋಬಳಿಯಲ್ಲಿ ಅತಿ ಹೆಚ್ಚು 1.2 ಸೆಂ.ಮೀ ಮಳೆಯಾಗಿದೆ ಹಾಗೂ ಇಳಕಲ್ ತಾಲ್ಲೂಕಿನ ಕರಡಿ ಹೋಬಳಿಯಲ್ಲಿ ಅತಿ ಹೆಚ್ಚು 1.4 ಸೆಂ.ಮೀ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.