
ಇಳಕಲ್: ದೊಡ್ಡನಗೌಡ ಪಾಟೀಲ ಶಾಸಕರಾಗಿದ್ದಾಗ ಮಾಡಿದ ಭ್ರಷ್ಟಾಚಾರದ ಬಹಳಷ್ಟು ದಾಖಲೆಗಳಿವೆ. ನನ್ನ ವಿರುದ್ಧ ಹೇಳಿಕೆ, ಭಾಷಣ ಮಾಡೋದು ಬಿಟ್ಟು ದಾಖಲೆಗಳೊಂದಿಗೆ ಕಂಠಿ ವೃತ್ತದಲ್ಲಿ ಬಹಿರಂಗ ಚರ್ಚೆಗೆ ಬರಲಿ' ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಸವಾಲು ಹಾಕಿದರು.
ಅವರು ನಗರದ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಜಿ ಶಾಸಕ ದೊಡ್ಡನಗೌಡ ಜಿ.ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.
ಯಾವ ಕಾಮಗಾರಿಯಲ್ಲಿ ಎಷ್ಟು ಕಮಿಷನ್ ಪಡೆದಿದ್ದಾರೆ, ಎಷ್ಟು ಅಭಿವೃದ್ಧಿ ಕೆಲಸಗಳಾಗಿವೆ ಎನ್ನುವ ಮಾಹಿತಿ ನನ್ನ ಬಳಿ ಇದೆ. ಹಾಗೆಯೇ ನಾನು ಶಾಸಕನಾಗಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ದಾಖಲೆಗಳನ್ನು ಬಹಿರಂಗ ಚರ್ಚೆಯನ್ನು ಜನರ ಮುಂದೆ ಮಾಡೋಣ. ಯಾರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದು ಜನರಿಗೆ ತಿಳಿಯುತ್ತದೆ ಎಂದರು.
ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದವರು ರಾಜಕೀಯವಾಗಿ ಪರಸ್ಪರ ಟೀಕೆ ಟಿಪ್ಪಣಿಗಳು ಮಾಡುತ್ತಾರೆ. ಆದರೆ ಪತ್ರಕರ್ತರು ಆರೋಪಗಳ ಬಗ್ಗೆ ಬರೆಯುವಾಗ ಇವರೇ ತಪ್ಪು ಮಾಡಿದ್ದಾರೆ ಎನ್ನುವಂತೆ ಬಿಂಬಿಸಬಾರದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಇಳಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ ತಟಗಾರ, ಶರಣಪ್ಪ ಆಮದಿಹಾಳ, ನಾಗರಾಜ ಪವಾರ, ಶರಣಪ್ಪ ರಾಠೋಡ, ಹುಲ್ಲಪ್ಪ ಹಳ್ಳೂರ, ಕೆ.ಎಂ.ಗುಡಿ, ಅಮರೇಶ ನಾಗೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.