ಬಾಗಲಕೋಟೆ: ‘ರಾಮ ಮಂದಿರದ ಹೆಸರಿನಲ್ಲಿ ಬಿಜೆಪಿಯವರು ಸಾವಿರಾರು ಯುವಕರನ್ನು ಬಲಿ ಕೊಟ್ಟಿದ್ದಾರೆ. ದಮ್ ಇದ್ದರೆ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಿ, ಲೋಕಸಭಾ ಚುನಾವಣೆಗೆ ಬರಲಿ’ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸವಾಲು ಹಾಕಿದರು.
ನಗರದಲ್ಲಿ ಭಾನುವಾರ ಜೆಡಿಎಸ್ ಜಿಲ್ಲಾ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಜಾತಿ–ಧರ್ಮ ಭೇದ ಎಣಿಸದೇ ಎಲ್ಲರನ್ನೂ ರಕ್ಷಣೆ ಮಾಡುವವರೇ ನಿಜವಾದ ಹಿಂದೂಗಳು. ಆದರೆ ಬಿಜೆಪಿಯ ನಕಲಿ ಹಿಂದೂಗಳಿಂದಾಗಿ ಧರ್ಮದ ಹೆಸರಲ್ಲಿ ಈಗಲೂ ಯುವಕರು ಜೈಲಿಗೆ ಹೋಗುತ್ತಿದ್ದಾರೆ’ ಎಂದರು.
‘ಮೋದಿ ಹೆಸರಲ್ಲಿ ಕತ್ತೆಗೆ ಟಿಕೆಟ್ ಕೊಟ್ಟರೂ ಗೆಲುವು ಸಾಧಿಸುತ್ತದೆ ಎಂಬ ಬಿಜೆಪಿಯವರ ಭ್ರಮೆ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಳಚಿದೆ. ಅವರ ಬತ್ತಳಿಕೆಯಲ್ಲಿದ್ದ ಎಲ್ಲಾ ಬಾಣಗಳು ಮುಗಿದಿವೆ. ಹಾಗಾಗಿ ರೈತರ ಹೆಸರು ಹೇಳಿಕೊಂಡು ಬರುತ್ತಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ ವ್ಯಕ್ತಿಗೆ ನನ್ನ ಬದಲಿಗೆ ಟಿಕೆಟ್ ಕೊಟ್ಟರು. ಟಿಕೆಟ್ ತಪ್ಪಿಸಲು ನಾನು ಸಣ್ಣ ಹುಡುಗ ಅಲ್ಲ. ಒಂಬತ್ತು ವರ್ಷ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷನಾಗಿ ಪಕ್ಷ ಸಂಘಟಿಸಿದ್ದೆ. ನನ್ನ ಹಿರಿತನಕ್ಕೂ ಬೆಲೆ ಕೊಡಲಿಲ್ಲ. ಅದೇ ಕಾರಣಕ್ಕೆ ಆ ಪಕ್ಷ ಬಿಡಬೇಕಾಯಿತು. ಟಿಕೆಟ್ ಪಡೆದವರು ಮೂರನೇ ಸ್ಥಾನ ಪಡೆದರು’ ಎಂದು ಲೇವಡಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.