ADVERTISEMENT

ಜಮಖಂಡಿ | ಬಸವಣ್ಣ, ಕನಕ ಸಮಾನತೆಯ ಹರಿಕಾರರು–ಭಾರತಿ ಹೆಗಡೆ

‘ಬಸವಣ್ಣ ಮತ್ತು ಕನಕದಾಸರು: ತೌಲನಿಕ ನೋಟ’ ರಾಜ್ಯಮಟ್ಟದ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:07 IST
Last Updated 25 ಫೆಬ್ರುವರಿ 2026, 6:07 IST
ಜಮಖಂಡಿಯ ಬಿಎಲ್‌ಡಿಇ ಸಂಸ್ಥೆಯ ವಾಣಿಜ್ಯ, ಬಿಎಚ್‌ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಮಹಾವಿದ್ಯಾಲಯದ ಆಯೋಜಿಸಿದ್ದ ‘ಬಸವಣ್ಣ ಮತ್ತು ಕನಕದಾಸರು: ತೌಲನಿಕ ನೋಟ’ ವಿಚಾರ ಸಂಕಿರಣವನ್ನು ಪ್ರೊ.ಎಸ್.ಎಚ್.ಲಗಳಿ ಉದ್ಘಾಟಿಸಿದರು
ಜಮಖಂಡಿಯ ಬಿಎಲ್‌ಡಿಇ ಸಂಸ್ಥೆಯ ವಾಣಿಜ್ಯ, ಬಿಎಚ್‌ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಮಹಾವಿದ್ಯಾಲಯದ ಆಯೋಜಿಸಿದ್ದ ‘ಬಸವಣ್ಣ ಮತ್ತು ಕನಕದಾಸರು: ತೌಲನಿಕ ನೋಟ’ ವಿಚಾರ ಸಂಕಿರಣವನ್ನು ಪ್ರೊ.ಎಸ್.ಎಚ್.ಲಗಳಿ ಉದ್ಘಾಟಿಸಿದರು   

ಜಮಖಂಡಿ: ‘ತಂತ್ರಜ್ಞಾನ ಬೆಳೆದಂತೆ ಮಾನವೀಯತೆ ಮರೆಮಾಚಿ, ಜಾತೀಯತೆ ತಾಂಡವಾಡುತ್ತಿದೆ. ನಮ್ಮೊಳಗಿನ ಮಲೀನತೆ ತೊಲಗದೇ ಹೋದರೆ ಯಾವ ತಂತ್ರಜ್ಞಾನಗಳು ಏನು ಮಾಡಲಾಗದು. ಬಸವಣ್ಣ ಮತ್ತು ಕನದಾಸರ ಚಿಂತನೆಗಳು ಇಂದಿಗೂ ಪ್ರಸ್ತುತ’ ಎಂದು ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿ ಭಾರತಿ ಹೆಗಡೆ ಹೇಳಿದರು.

ಇಲ್ಲಿನ ಬಿಎಲ್‌ಡಿಇ ಕಾಲೇಜಿನಲ್ಲಿ ಶನಿವಾರ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಬಿಎಲ್‌ಡಿಇ ಸಂಸ್ಥೆಯ ವಾಣಿಜ್ಯ, ಬಿಎಚ್‌ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ‘ಬಸವಣ್ಣ ಮತ್ತು ಕನಕದಾಸರು: ತೌಲನಿಕ ನೋಟ’ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬಸವಣ್ಣ ಮತ್ತು ಕನಕದಾಸರು ಜಾತಿರಹಿತ, ಸಮಾನತೆ, ಕಾಯಕ ಆಧಾರಿತ ಸಮಾಜವನ್ನು ನಿರ್ಮಿಸಿದ ದಾರ್ಶನಿಕರು. ಬಸವಣ್ಣನವರ ದಯೆ, ಅನುಭವ ಮಂಟಪ ಹಾಗೂ ಕನಕದಾಸರ ಸಮಾನತೆಯ ಕೀರ್ತನೆಗಳು ಸಮಾಜಕ್ಕೆ ಶಾಶ್ವತ ಸ್ಫೂರ್ತಿಯಾಗಿವೆ. ವರ್ಣ ವ್ಯವಸ್ಥೆ ಮತ್ತು ತಾರತಮ್ಯದ ವಿರುದ್ಧ ಹೋರಾಡಿ ಮಾನವತಾವಾದವನ್ನು ಎತ್ತಿ ಹಿಡಿದ ಮಹಾನ ಚೇತನರಿವರು’ ಎಂದರು.

ADVERTISEMENT

ಆಡಳಿತಾಧಿಕಾರಿ ಪ್ರೊ.ಎಸ್.ಎಚ್.ಲಗಳಿ ಉದ್ಘಾಟಿಸಿ ಮಾತನಾಡಿ, ‘ದಯವೇ ಧರ್ಮದ ಮೂಲ ಎಂದು ಪ್ರತಿಪಾದಿಸಿದ ಜಗತ್ತಿನ ಮೊದಲ ಶರಣ ಬಸವಣ್ಣ. ಕುಲದ ಹೆಸರಿನಲ್ಲಿ ಹೊಡೆದಾಡುವ ಜನರಿಗೆ ಮಾರ್ಮಿಕ ನುಡಿಗಳ ಮೂಲಕ ಜಾತಿ ರಹಿತ ಸುಂದರ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದವರು ಕನಕದಾಸರು. ಇಂತಹ ಶರಣರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು’ ಎಂದರು.

ಕಾಲೇಜಿನ ಪ್ರಾಂಶುಪಾಲ ಪಿ.ಡಿ.ಪೋಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಬಸವಣ್ಣ ಮತ್ತು ಕನಕದಾಸರಲ್ಲಿ ನುಡಿ ಮೌಲ್ಯ’ ಕುರಿತು ನೇಸರಗಿಯ ವಿನಯ ನಂದಿಹಾಳ, ‘ಬಸವಣ್ಣ ಮತ್ತು ಕನಕದಾಸರು: ಮಾನವೀಯ ಮೌಲ್ಯಗಳು’ ಕುರಿತು ಕೊಪ್ಪಳದ ಪಾರ್ವತಿ ಕನಕಗಿರಿ, ‘ಬಸವಣ್ಣ-ಕನಕದಾಸರಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳು’ ಕುರಿತು ರಾಣಿಬೆನ್ನೂರಿನ ರವಿ.ಎಂ ವಿಚಾರ ಮಂಡಿಸಿದರು.

ಕಾರ್ಯಕ್ರಮದ ಸಂಚಾಲಕ ಆನಂದ ಉಪ್ಪಾರ, ಉಪಪ್ರಾಂಶುಪಾಲ ಡಿ.ಎಸ್.ನಿಟ್ಟೂರ, ರವಿಶಂಕರ, ಪ್ರೊ.ಮಲ್ಲಿಕಾರ್ಜುನ ಬೀರಣ್ಣ, ಬಿ.ಎನ್.ಅಸ್ಕಿ, ಎಸ್.ಪಿ.ಮಟೋಳಿ, ಉತ್ತಮ ವಡಗೊಲೆ, ಎಲ್.ಎಸ್.ಪಡತಾರೆ, ಪ್ರೊ.ಶ್ರೀನಿವಾಸ ಕಟ್ಟಿಮನಿ, ಪ್ರೊ.ಎಸ್.ಪಿ.ಗದ್ಯಾಳ, ಉತ್ತಮ ಕಾಂಬಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.