
ಜಮಖಂಡಿ: ಇಲ್ಲಿನ ಸರ್ಕಾರಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕಕರು ವಜಾಗೊಂಡಿದ್ದರಿಂದ ಬೇಸತ್ತು ಶುಕ್ರವಾರ ರಾತ್ರಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.
ಸುನಂದಾ ಮಠಪತಿ, ಹಣಮಂತ ಕಾಂಬಳೆ, ವಿಜಯ ಘೋರ್ಪಡೆ, ಯಮುನಾ ಅವರು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಾಸಪ್ಪ ಮುದ್ದಿಗೌಡರ ಅವರ ಕೊಠಡಿ ಬಾಗಿಲಿ ಬಳಿ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ವಾಗ್ವಾದ ನಡೆಯಿತು. ತಮ್ಮ ಬೇಡಿಕೆಗೆ ಮುಖ್ಯ ವೈದ್ಯಾಧಿಕಾರಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ, ಆತ್ಮಹತ್ಯೆಗೆ ಮುಂದಾದರು.
ಸ್ಥಳದಲ್ಲಿದ್ದವರು ಅವರನ್ನು ತಡೆದರು. ಘಟನೆಯಲ್ಲಿ ನಾಲ್ವರ ಬಾಯಿಯೊಳಗೆ ಪೆಟ್ರೋಲ್ ಹೋಗಿದ್ದರಿಂದ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಯಿತು.
‘ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಏಜೆನ್ಸಿ ಮೂಲಕ ನೇಮಕದ 10ಕ್ಕೂ ಅಧಿಕ ನೌಕರರು ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ರೋಸ್ಟರ್ ನಿಯಮದ ಪ್ರಕಾರ ಇತ್ತೀಚೆಗೆ ಏಜೆನ್ಸಿ ಅವರನ್ನು ವಜಾಗೊಳಿಸಿತ್ತು. ಮರುನೇಮಕಕ್ಕೆ ಆಗ್ರಹಿಸಿದರೂ ಸ್ಪಂದಿಸಿಲ್ಲ. ಬೇರೆ ತಾಲ್ಲೂಕಿನವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.
‘ಪ್ರತಿ ವರ್ಷ ಟೆಂಡರ್ ಕರೆಯಲಾಗುತ್ತದೆ. ಹಲವಾರು ಏಜನ್ಸಿಗಳು ಅರ್ಜಿ ಸಲ್ಲಿಸುತ್ತವೆ. ಇದರಲ್ಲಿ ಆಯ್ಕೆಯಾದ ಏಜನ್ಸಿಯು ನೌಕರರನ್ನು ನೇಮಕ ಮಾಡಿಕೊಳ್ಳುತ್ತದೆ. ಸಿಬ್ಬಂದಿಯನ್ನು ಪರಿಶೀಲಿಸಿ ಆಸ್ಪತ್ರೆ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ. ಈ ಪ್ರತಿಭಟನೆಗೂ ಆಸ್ಪತ್ರೆಗೂ ಯಾವುದೇ ಸಂಬಂಧ ಇಲ್ಲ’ ಎಂದು ಮುಖ್ಯ ವೈದ್ಯಾಧಿಕಾರಿ ವಾಸಪ್ಪ ಮುದ್ದಿಗೌಡರ ಪ್ರಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.