ಬಾಗಲಕೋಟೆ: ಧಾರವಾಡ ಮತ್ತು ಹಾವೇರಿಯಿಂದ ಜಿಲ್ಲೆಗೆ ಬಂದಿದ್ದ ಇಬ್ಬರಿಗೆ ಕೋವಿಡ್–19 ಸೋಂಕು ಶನಿವಾರ ದೃಢಪಟ್ಟಿದೆ. ಅವರನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಗ್ರಾಮದ 25 ವರ್ಷದ ಯುವಕ (ಪಿ-8300), ಹುನಗುಂದ ತಾಲ್ಲೂಕು ಗುಡೂರ ಗ್ರಾಮದ 50 ವರ್ಷದ ಮಹಿಳೆ (ಪಿ-8301) ಸೋಂಕು ದೃಢಪಟ್ಟವರು. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 117ಕ್ಕೆ ಏರಿಕೆಯಾಗಿದೆ.
ಕಲಾದಗಿಯ ಯುವಕ ಹಾವೇರಿಯ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲಾಖೆಯ ತರಬೇತಿಗೆ ಹಾಜರಾಗುವ ನಿಟ್ಟಿನಲ್ಲಿ ಮುಂಜಾಗ್ರತೆ ಕ್ರಮವಾಗಿ ಗಂಟಲು ದ್ರವದ ಸ್ಯಾಂಪಲ್ ನೀಡಿದ್ದರು. ಈ ವೇಳೆ ಸೋಂಕು ಇರುವುದು ದೃಢಪಟ್ಟಿದೆ.
ಕಲಾದಗಿಯ ಯುವಕನಿಗೆ ಜೂನ್ 12 ರಂದು ಬಾಗಲಕೋಟೆಯಲ್ಲಿ ಮದುವೆ ಆಗಿದೆ. ಮರುದಿನ ಕಲಾದಗಿಯಲ್ಲಿ ಆರತಕ್ಷತೆ (ವಲಿಮಾ) ನಡೆದಿದೆ. ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರನ್ನು ಪತ್ತೆ ಹಚ್ಚಲಾಗುತ್ತಿದೆ. ಅವರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಿದ ನಂತರವೇ ಹೆಚ್ಚಿನ ವಿವರ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೋಂಕಿತ ಯುವಕ ಕಲಾದಗಿಯಲ್ಲಿ ವಾಸಿಸುತ್ತಿದ್ದ ಪ್ರದೇಶ ಮತ್ತು ಮದುವೆ ನಡೆದ ಸ್ಥಳದ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ.
ಗುಡೂರಿನ ಸೋಂಕಿತ ಮಹಿಳೆ ಧಾರವಾಡದಿಂದ ಮರಳಿದ್ದರು. ಅವರು ಗ್ರಾಮಕ್ಕೆ ಬರುವ ಮುನ್ನ ಧಾರವಾಡದಲ್ಲಿ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ನೀಡಿದ್ದರು. ಈ ವೇಳೆ ಸೊಂಕು ದೃಢಪಟ್ಟಿದೆ.ಮಹಿಳೆಯ ಮನೆಯವರನ್ನು ಕ್ವಾರಂಟೈನ್ ಮಾಡಲಾಗಿದೆ. ಗ್ರಾಮದಲ್ಲಿ ಅವರು ವಾಸಿಸುತ್ತಿದ್ದ ಪ್ರವೇಶವನ್ನು ಸೀಲ್ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕ್ವಾರಂಟೈನ್ಗೆ 16 ಮಂದಿ: ಹೊರ ರಾಜ್ಯಗಳಿಂದಶನಿವಾರ ಒಟ್ಟು 16 ಮಂದಿ ಜಿಲ್ಲೆಗೆ ಬಂದಿದ್ದಾರೆ. ಅವರ ಪೈಕಿ ಮಹಾರಾಷ್ಟ್ರದಿಂದ ಏಳು, ದೆಹಲಿಯಿಂದ ಇಬ್ಬರು, ಮಧ್ಯಪ್ರದೇಶದಿಂದ ಒಬ್ಬರು, ಕೇರಳ ಮತ್ತು ಪಶ್ಚಿಮ ಬಂಗಾಳದಿಂದ ತಲಾ ಮೂವರು ಬಂದಿದ್ದಾರೆ. ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.