ಬಾಗಲಕೋಟೆ: ನೀವು ಸೀರೆ, ಉಡಿಕೆ ಮಾಡಿಕೊಂಡವರಿಗೆ ಸರ್ಕಾರದಲ್ಲಿ ಸ್ಥಾನಮಾನ ಕೊಟ್ಟರೆ, ಒರಿಜಿನಲ್ ಪತಿವ್ರತೆಯರು (ಮೂಲ ಬಿಜೆಪಿಯವರು) ಎಲ್ಲಿಗೆ ಹೋಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದರು.
ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟ ಮಹಿಷಿಯರಿಗೆ ಅವಕಾಶ ನೀಡದ ಕಾರಣ ಸರ್ಕಾರದಭವಿಷ್ಯ ಅತಂತ್ರವಾಗಿದೆ. ಇದು ಇರುತ್ತೋ ಯಾವಾಗ ಬೀಳುತ್ತೋ, ಯಾವಾಗ ಎಲೆಕ್ಷನ್ ಬರುತ್ತೋ ಅಂತ ಹೇಳೋಕಾಗಲ್ಲ ಎಂದು ಭವಿಷ್ಯ ನುಡಿದರು.
ಯಡಿಯೂರಪ್ಪ ಪರಿಸ್ಥಿತಿ ನೋಡಿದ್ರೆ ನನಗೆ ಅಯ್ಯೋ ಅನ್ನಿಸುತ್ತೆ. ಪಾಪ ಅವರಷ್ಟು ನೋವು ಪಡ್ತಿರೋರು ಯಾರೂ ಇಲ್ಲ.ಸರ್ಕಾರಕ್ಕೆ ಎಲ್ಲೆಂದರಲ್ಲಿ ತೂತು ಬಿದ್ದಿವೆ. ಬಿದ್ದ ತೂತುಗಳನ್ನ ಮುಚ್ಚೋದಲ್ಲ, ಪ್ಯಾಚ್ ಹಾಕುವಂತಹದ್ದು. ಅದನ್ನು ಮುಚ್ಚೋಕೆ ಸಾಬರೇ ಆಗಬೇಕನಿಸುತ್ತೇ ನೋಡೋಣ ಎಂದರು.
ಈಗಿನ ಮಂತ್ರಿ ಮಂಡಲಕ್ಕೆ ಮರ್ಯಾದೆಯೇ ಇಲ್ಲ. ಅದು ಬಸ್ಸ್ಟ್ಯಾಂಡ್ ಬಸವಣ್ಣನ ಜೋಳಿಗೆಯಂತಾಗಿದೆ. ಯಾರು ಬರ್ತಾರು,ಯಾರು ಹೋಗ್ತಾರೋ, ಅದಕ್ಕೊಂದು ಕಿಮ್ಮತ್ತಿಲ್ಲ.ಹಿಂದೆ ಮಂತ್ರಿಗಳಂದ್ರೆ ಎದ್ದು ನಿಂತು ಕಿಮ್ಮತ್ ಕೊಡೋರು. ಈಗ ಸಿಎಂಗೆ ಕಿಮ್ಮತ್ತಿಲ್ಲ, ದೆಹಲಿಗೆ ಹೋದ್ರೂ ಪ್ರಧಾನಮಂತ್ರಿ ಭೇಟಿಗೆ ಅವಕಾಶ ಸಿಗ್ತಿಲ್ಲ ಎಂದರು.
ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ 3 ಲಕ್ಷ ಮನೆ ಬಿದ್ದವು, ಜನ ಸತ್ತರು ಕೇಂದ್ರದಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ ಇಲ್ಲ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.