
ಮಾಣಿಕಮಠದ ಅನ್ನದಾನೇಶ್ವರ ಶ್ರೀ ನಿಧನ
ಜಮಖಂಡಿ: ಜಮಖಂಡಿ ಸಮೀಪದ ಬಂಡಿಗಣಿ ಬಸವಗೋಪಾಲ ನೀಲ ಮಾಣಿಕಮಠದ ಅನ್ನದಾನೇಶ್ವರ ಶ್ರೀಗಳು (76) ನಿಧನರಾಗಿದ್ದಾರೆ.
ಬೆಳಗಾವಿ ಕೆಎಲ್ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ.
ಮೃತ ಶ್ರೀಗಳು ಮೂಲ ಅಥಣಿ ತಾಲ್ಲೂಕಿನ ಸವದಿ ಗ್ರಾಮದವರು. ತಮ್ಮ 18ನೇ ವಯಸ್ಸಿನಲ್ಲಿ ಬಂಡಿಗಣಿಗೆ ಬಂದು ಬಸವೇಶ್ವರ ಪೂಜೆ ಮಾಡುತ್ತಾ ಅಲ್ಲಿಯೇ ನೆಲೆಸಿದರು.
ಪಂಢರಪುರ, ತಿರುಪತಿ, ಶ್ರೀಶೈಲ, ಕೊಲ್ಲಾಪುರ ಸೇರಿದಂತೆ ರಾಜ್ಯ ಹಾಗೂ ಅಂತರರಾಜ್ಯದ ಪ್ರಮುಖ ಸ್ಥಳಗಳಲ್ಲಿ ಅನ್ನಪ್ರಸಾದ ಮಾಡುತ್ತಾ ಅನ್ನದಾನೇಶ್ವರ ಎಂಬ ಬಿರುದು ಪಡೆದಿದ್ದರು.
ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ತ್ರಿವಿಧ ದಾಸೋಹ ಪ್ರಶಸ್ತಿ, ಆಪತ್ಭಾಂದವ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ.
ಮಠದ ಆವರಣದಲ್ಲಿ ಶನಿವಾರ ಬೆಳಿಗ್ಗೆ 5 ಗಂಟೆಯಿಂದ ಸಂಜೆ 4 ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ಸಂಜೆ 5ಕ್ಕೆ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಉತ್ತರಕರ್ನಾಟಕ ಭಾಗದಲ್ಲಿ ಅಪಾರ ಭಕ್ತರನ್ನು ಹೊಂದಿದ್ದು, ಅಂತ್ಯ ಸಂಸ್ಕಾರಕ್ಕೆ ಅಪಾರ ಭಕ್ತರು ಬರುವ ನೀರಿಕ್ಷೆ ಇರುವದರಿಂದ ಪೊಲೀಸ್ ರು ಸೂಕ್ತ ಬಂದೋಬಸ್ತಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.