ಕೆರೂರ: ಪಟ್ಟಣವು ಅಭಿವೃದ್ದಿ ಹೊಂದಬೇಕಾದರೆ ಜನರು ಪಕ್ಷಭೇದ ಮರೆತು ಕೈಜೋಡಿಸಿದರೆ ಪಟ್ಟಣವು ಅಭಿವೃದ್ದಿ ಪಥದತ್ತ ಸಾಗುತ್ತದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2022-23ನೇ ಸಾಲೀನ ವಿಶೇಷ ಅಭಿವೃದ್ದಿ ಯೋಜನೆಯಡಿಯಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಉನ್ನತ ಶಿಕ್ಷಣಕ್ಕೆ ಒತ್ತು ನೀಡಬೇಕು. ಸ್ನಾತಕೋತ್ತರ ಶಿಕ್ಷಣಕ್ಕೆ ಪಾಲಕರು ಹಿಂದೇಟು ಹಾಕಬಾರದು ಎಂದು ಹೇಳಿದರು.
ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕಲಿಕೆಗೆ ಯಾವುದೇ ರೀತಿಯ ಕೊರತೆ ಉಂಟಾಗಬಾರದು. ಕಾಲೇಜಿಗೆ ಕುಡಿಯುವ ನೀರು, ಶೌಚಾಲಯ, ರಸ್ತೆ, ಕ್ರೀಡಾ ಮೈದಾನ, ಬಸ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ 4 ತಿಂಗಳನಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದನ್ನು ಗಮನಿಸಿದ ಶಾಸಕು ಸ್ಥಳದಲ್ಲಿಯೇ ಹೆಸ್ಕಾಂ ಶಾಖಾಧಿಕಾರಿಗೆ ಕೆರೆ ಮಾಡಿ ಕಾಲೇಜಿಗೆ ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ಪೂರೈಸುವಂತೆ ಹೇಳಿದರು.
ಕಾಲೇಜು ಪ್ರಾಚಾರ್ಯ ಪ್ರೊ.ಮಲ್ಲಪ್ಪ ಹೊಸುರ ಮಾತನಾಡಿ, ಶಾಸಕರು ಪಟ್ಟಣಕ್ಕೆ ಎಂ.ಎ., ಎಂ.ಕಾಂ, ಪದವಿ ಕಾಲೇಜನ್ನು ಪಟ್ಟಣಕ್ಕೆ ನೀಡಬೇಕೆಂದು ಮನವಿ ಮಾಡಿದರು.
ಬಾದಾಮಿ ತಾಲ್ಲೂಕಿನಲ್ಲಿ ಕೆರೂರ ಪಟ್ಟಣವು ವ್ಯವಹಾರಿಕವಾಗಿ ಹಾಗೂ ಆರ್ಥಿಕವಾಗಿ ಸುತ್ತಮುತ್ತಲ ಹಳ್ಳಿಗಳಿಗೆ ಪ್ರಮುಖ ಕೇಂದ್ರ ಬಿಂದುವಾಗಿದೆ. ಅಭಿವೃದ್ದಿಗೆ ಸ್ಥಳೀಯ ಮುಖಂಡರು ಶಾಸಕರ ಜೊತೆ ಕೈಜೋಡಿಸಬೇಕು ಎಂದು ಸತ್ಯ ಶೋಧಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪರಶುರಾಮ ಮಹರಾಜನವರ ಹೇಳಿದರು.
ಪಟ್ಟಣಕ್ಕೆ ಒಳಚರಂಡಿ ಕಾಮಗಾರಿಗೆ ಅನುಮೋದನೆ ದೊರಕಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕ ತಿಳಿಸಿದರು.
ಕರ್ನಾಟಕ ಗೃಹ ಮಂಡಳಿ ಅಭಿಯಂತರ ವಿಜಯ ದೇಶಿಂಗೆ, ಗುತ್ತಿದೇದಾರ ಆನಂದ ಜಾಲಗಾರ, ಬಿ.ಕೆ ಕೋವಳ್ಳಿ, ಪ.ಪಂ ಸದಸ್ಯರಾದ ವಿಠ್ಠಲಗೌಡ ಗೌಡರ, ಬಸವರಾಜ ಹರಣಶಿಕಾರಿ, ಸಿಡಿಸಿ ಸದಸ್ಯ ಧನಂಜಯ ಕಂದಕೂರ, ಆರ್.ಎಸ್.ನೀಡೋಣಿ, ದೇವರಾಜ ಚೂರಿ, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.