
ಕೆರೂರ: ಚಿಂಚಲಕಟ್ಟಿ ಗ್ರಾಮದ ಮಾಜಿ ಸೈನಿಕ ಹಾಗೂ ಕರ್ತವ್ಯನಿರತ ಪೊಲೀಸ್ ಕಾನ್ಸ್ಟೆಬಲ್ ಹಣಮಂತ ಸಿದ್ದಪ್ಪ ಮೈಲಾರಿ (38) ಅವರ ಅಂತ್ಯಕ್ರಿಯೆ ಬುಧವಾರ ಸ್ವ- ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ಮೃತ ಮಾಜಿ ಸೈನಿಕ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮಂಗಳವಾರ ಹೃದಯಾಘಾತದಿಂದ ನಿಧನರಾದರು.
ಮೃತರು ಸುಮಾರು 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ 4 ವರ್ಷಗಳ ಹಿಂದೆ ಪೋಲೀಸ್ ಇಲಾಖೆ ಸೇರ್ಪಡೆಗೊಂಡು ಸೇವೆ ಸಲ್ಲಿಸುತ್ತಿದ್ದರು,ಮೃತರ ಪಾರ್ಥೀವ ಶರೀರವು ಬೆಂಗಳೂರಿನಿಂದ ಕೆರೂರ ಪಟ್ಟಣಕ್ಕೆ ಬುಧವಾರ ಆಗಮಿಸಿತು.
ಮೃತ ಮಾಜಿ ಸೈನಿಕನ ಪಾರ್ಥೀವ ಶರೀರವನ್ನು ಕಂಡು ಕುಟುಂಬಸ್ಥರ ಹಾಗೂ ಗ್ರಾಮಸ್ಥರ ಆಕ್ರಂದಣ ಮುಗಿಲು ಮುಟ್ಟಿತು. ಪಟ್ಟಣದ ಎಪಿಎಮ್ ಸಿ ಮಾರುಕಟ್ಟೆಯಿಂದ ಚಿಂಚಲಕಟ್ಟಿ ಗ್ರಾಮದವರೆಗೆ ಪಾರ್ಥೀವ ಮೆರವಣಿಗೆ ನಡೆಯಿತು,ಮೆರವಣಿಗೆಗೂ ಮುನ್ನ ಮಾಜಿ ಸೈನಿಕರ ಸಂಘದವರು ಅಗಲಿದ ಮಾಜಿ ಸೈನಿಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಮೃತರಿಗೆ ಪತ್ನಿ ಮೈನಾವತಿ,ಮಗ ಅಕ್ಷಯ,ಮಗಳು ಅಮೃತಾ ಸೇರಿದಂತೆ ಅಪಾರ ಬಂದುಬಳಗ ಅಗಲಿದ್ದಾರೆ. ಅಂತ್ಯಕ್ರಿಯೆಯಲ್ಲಿ ಮಾಜಿ ಸೈನಿಕರು,ಅಧಿಕಾರಿಗಳು, ಪೋಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.