ಕೂಡಲಸಂಗಮ: ನಾರಾಯಣಪೂರ ಬಸವಸಾಗರ ಜಲಾಶಯ ಹಿನ್ನೀರು ಇಳಿಮುಖಗೊಂಡ ಪರಿಣಾಮ ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮ ಬಳಿ ಮಲಪ್ರಭಾ ನದಿಯ ಒಡಲು ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ಇಳಿಮುಖಗೊಂಡ ಪರಿಣಾಮ ಮಲಪ್ರಭಾ ನದಿ ದಡದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಮಲಪ್ರಭಾ ನದಿ ದಡದ ಕೂಡಲಸಂಗಮ, ಕೆಂಗಲ್ಲ, ಕಜಗಲ್ಲ, ವದರಗೋಡದಿನ್ನಿ, ಹೂವನೂರ, ನಂದನೂರ, ಗಂಜಿಹಾಳ, ಬೆಳಗಲ್ಲ, ಬಿಸನಾಳಕೊಪ್ಪ, ಇದ್ದಲಗಿ ಮುಂತಾದ ಗ್ರಾಮಗಳ ರೈತರು ಮಳೆ ಕೊರತೆಯಿಂದ ಅತಂತ್ರರಾದ ಪರಿಣಾಮ, ಇದೇ ನದಿಯನ್ನು ನಂಬಿ ಗೋಧಿ, ಜೋಳ, ಶೇಂಗಾ, ಕಡಲೆ, ಕಬ್ಬು ಮುಂತಾದ ಬೆಳೆಗಳನ್ನು ನಾಟಿ ಮಾಡಿದ್ದು, ಹುಲುಸಾಗಿ ಬೆಳೆದಿವೆ.
ಉತ್ತಮ ಫಸಲು ಪಡೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ನದಿ ನೀರು ಇಳಿಮುಖಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಜನವರಿ 8ರಂದು ಸಂಗಮೇಶ್ವರ ಕಾರ್ತಿಕೋತ್ಸವ, ಜ.12 ರಿಂದ 14ರ ವರೆಗೆ ಶರಣ ಮೇಳ, 15 ರಂದು ಮಕರ ಸಂಕ್ರಾಂತಿ ಇದ್ದು, ಲಕ್ಷಾಂತರ ಭಕ್ತರು ಸುಕ್ಷೇತ್ರಕ್ಕೆ ಬರುವರು. ನದಿ ನೀರು ಇನ್ನಷ್ಟು ಇಳಿದರೆ ಪುಣ್ಯಸ್ನಾನ, ಕುಡಿಯುವ ನೀರಿಗೂ ತೊಂದರೆ ಆಗಬಹುದು.
ಪ್ರತಿ ವರ್ಷ ಫೆಬ್ರುವರಿ ಕೊನೆಯವಾರ ನದಿ ನೀರು ಇಳಿಮುಖಗೊಳ್ಳುತ್ತಿತ್ತು. ಆದರೆ ಈ ವರ್ಷ ಅವಧಿಗೂ ಮುನ್ನ ಇಳಿಮುಖಗೊಂಡಿದೆ.
ಕುಡಿಯುವ ನೀರು ರೈತರ ಅನುಕೂಲಕ್ಕಾಗಿ ಸರ್ಕಾರ ಮಲಪ್ರಭಾ ನದಿಗೆ ನೀರು ಬಿಡುವ ಕಾರ್ಯ ಮಾಡಬೇಕು ಗಂಗಾಧರ ದೊಡಮನಿ- ಹಿರಿಯ ಮುಖಂಡ ಕೂಡಲಸಂಗಮ
ಒಡಲು ತುಂಬಿದ ತ್ಯಾಜ್ಯ ಪುಣ್ಯಸ್ನಾನ ಮಾಡಿದ ಕೆಲವು ಭಕ್ತರು ನದಿಯಲ್ಲಿ ಬಟ್ಟೆ ಬಿಡುತ್ತಾರೆ. ದೇವರ ಭಗ್ನ ಮೂರ್ತಿಗಳು ಪೂಜೆಯ ಸಾಮಗ್ರಿಗಳನ್ನು ನದಿಯಲ್ಲೇ ಎಸೆದ ಪರಿಣಾಮ ನೀರು ಇಳಿಮುಖಗೊಂಡಾಗ ಅವುಗಳ ದರ್ಶನವಾಗುತ್ತದೆ. ಮಲಪ್ರಭಾ ನದಿಯ ಒಡಲು ತ್ಯಾಜ್ಯವಸ್ತು ಕೊಳೆತ ಬಟ್ಟೆ ಭಗ್ನಮೂರ್ತಿಗಳಿಂದ ತುಂಬಿದ್ದು ದುರ್ವಾಸನೆ ಬೀರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.