ADVERTISEMENT

ಬಸವ ಜಯಂತಿ: ನಡೆಯದ ಕಾರ್ಯಕ್ರಮ

ಕೂಡಲಸಂಗಮ ಅಭಿವೃದ್ಧಿ ಮಂಡಳಿ ವಿರುದ್ಧ ಬಸವ ಭಕ್ತರ ಆಕ್ರೋಶ

ಶ್ರೀಧರ ಗೌಡರ
Published 11 ಮೇ 2024, 4:41 IST
Last Updated 11 ಮೇ 2024, 4:41 IST
ಬಸವ ಜಯಂತಿ ನಿಮಿತ್ಯ ಬಸವಣ್ಣನ ಐಕ್ಯಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಭಕ್ತರು.
ಬಸವ ಜಯಂತಿ ನಿಮಿತ್ಯ ಬಸವಣ್ಣನ ಐಕ್ಯಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಭಕ್ತರು.   

ಕೂಡಲಸಂಗಮ: ಬಸವಣ್ಣನ ತತ್ವ ಪ್ರಸಾರಕ್ಕೆ ಆರಂಭಗೊಂಡ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಬಸವಣ್ಣನ ವಿದ್ಯಾಭೂಮಿ, ಐಕ್ಯ ಸ್ಥಳವಾದ ಕೂಡಲಸಂಗಮದಲ್ಲಿ ಬಸವ ಜಯಂತಿ ದಿನ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳದೇ ಇರುವುದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಯಿತು.

ಶುಕ್ರವಾರ ಬಸವ ಜಯಂತಿ ನಿಮಿತ್ಯ ನಾಡಿನ ವಿವಿಧ ಭಾಗಗಳಿಂದ ಆಮಿಸಿದ್ದ ಬಸವ ಭಕ್ತರು ಬಸವಣ್ಣನ ಐಕ್ಯಸ್ಥಳ ದರ್ಶನ ಪಡೆದು, ಪ್ರಾರ್ಥನೆ, ವಚನ ಪಠಣ ಮಾಡಿದರು.

ಮಂಡಳಿಯು ಜಯಂತಿ ನಿಮಿತ್ಯ ಬಸವ ಪುತ್ಥಳಿ, ಎತ್ತುಗಳ ಮೆರವಣಿಗೆ ಮಾಡುವುದನ್ನು ನೋಡಿ ಬಸವ ಭಕ್ತರು ಆಶ್ಚರ್ಯ ಪಡುವುದರ ಜೊತೆಗೆ ಆಕ್ರೋಶ ವ್ಯಕ್ತಪಡಿಸಿದರು. ಎತ್ತುಗಳ ಮೆರವಣಿಗೆ ಮಾಡುವುದು ಎಷ್ಟು ಸೂಕ್ತ ಎಂದೂ ಪ್ರಶ್ನಿಸಿದರು.

ADVERTISEMENT

ಚುನಾವಣೆ ನೀತಿ ಸಂಹಿತೆ ಇದ್ದಾಗಲೇ ಹಿಂದೆ ಮಂಡಳಿಯ ವಿಶೇಷಾಧಿಕಾರಿಯಾಗಿದ ಶಿವಾನಂದ ಜಾಮದಾರ ಬಸವ ಜಯಂತಿ ನಿಮಿತ್ಯ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆಯುಕ್ತರಾಗಿದ್ದ ಮಹಾದೇವ ಮುರಗಿ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ರಾಜಶ್ರೀ ಅಗಸರ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಿದ್ದರು.

ಕಳೆದ ಎರಡು ವರ್ಷಗಳಿಂದ ಮಂಡಳಿಯ ಅಧಿಕಾರಿಗಳು ಚುನಾವಣೆ ನೆಪದಲ್ಲಿ ಬಸವ ಜಯಂತಿ ಆಚರಣೆ ಮಾಡದೇ ಇರುವುದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಚುನಾವಣೆ ನೀತಿ ಸಂಹಿತೆ ನಡುವೆ ಏ.29 ರಂದು ಸಂಗಮೇಶ್ವರ ಜಾತ್ರೆ ಸಂಭ್ರಮದಿಂದ ನಡೆಯಿತು. ಜಾತ್ರೆ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಂಡಳಿ ಹಮ್ಮಿಕೊಂಡಿತ್ತು.

‘ಮಂಡಳಿಯಲ್ಲಿರುವ ಬಸವಣ್ಣನ ವಿರೋಧಿಗಳಿಂದ ಬಸವ ಜಯಂತಿ ಕಾರ್ಯಕ್ರಮ ನಡೆಯುತ್ತಿಲ್ಲ’ ಎಂದು ಗ್ರಾಮದ ಬಸವರಾಜ ಗೌಡರ ಹೇಳಿದರು.

ಚುಣಾವಣೆ ನೀತಿ ಸಂಹಿತೆ ನಡುವೆ ಮಂಡಳಿಯ ಅಧಿಕಾರಿಗಳು ಕಳೆದ ವರ್ಷ, ಈ ವರ್ಷ ಬಸವನ ಬಾಗೇವಾಡಿಯಲ್ಲಿ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕೂಡಲಸಂಗಮದಲ್ಲಿ ಏಕೆ ಮಾಡುತ್ತಿಲ್ಲ ಎಂಬ ಪ್ರಶ್ನೆ ಬಸವ ಭಕ್ತರನ್ನು ಕಾಡಿತು.

ಬಸವನ ಬಾಗೇವಾಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂದಿನ ವರ್ಷ ಬಸವ ಜಯಂತಿಯನ್ನು ಕೂಡಲಸಂಗಮದಲ್ಲಿಯೇ ಅರ್ಥಪೂರ್ಣವಾಗಿ ಆಚರಿಸುತ್ತೇವೆ

-ನಿಂಗಪ್ಪ ಬಿರಾದಾರ, ಆಯುಕ್ತ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಕೂಡಲಸಂಗಮ

‘ಚುನಾವಣಾ ಆಯೋಗ ಸೂಕ್ತ ನಿರ್ದೇಶನ ನೀಡಲಿ’ ದಾರ್ಶನಿಕರ ಜಯಂತಿಗೆ ಚುನಾವಣೆ ನೀತಿ ಸಂಹಿತೆ ಯಾವುದೇ ಕಾರಣಕ್ಕೂ ಅಡ್ಡಿ ಆಗಬಾರದು. ಬಸವ ಜಯಂತಿ ದಿನದಂದು ಚುಣಾವಣೆಗಳು ಬರುವುದರಿಂದ ನೀತಿ ಸಂಹಿತೆ ನೆಪದಲ್ಲಿ ಕೆಲವು ಅಧಿಕಾರಿಗಳು ಜಯಂತಿಯನ್ನು ನೆಪಮಾತ್ರಕ್ಕೆ ಆಚರಿಸುವುದು ಸರಿಯಲ್ಲ. ದಾರ್ಶನಿಕರ ಜಯಂತಿ ಆಚರಣೆ ಅಧಿಕಾರಿಗಳಿಗೆ ಚುನಾವಣಾ ಆಯೋಗ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.