ಬೀಳಗಿ: ‘ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಸೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಶೇಷ ಸಂಪುಟ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಈ ಯೋಜನೆಗೆ ಶೀಘ್ರಗತಿಯಲ್ಲಿ ಪರಿಹಾರ ಸಿಗುವಂತಾಗಲಿ’ ಎಂದು ಶಾಸಕ ಜೆ.ಟಿ. ಪಾಟೀಲ ತಿಳಿಸಿದರು.
ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಲವು ವರ್ಷಗಳಿಂದ ಯೋಜನೆಯ 3ನೇ ಹಂತ ಪೂರ್ಣಗೊಳಿಸಲು ಸಂತ್ರಸ್ತರು, ಜನಪ್ರತಿನಿಧಿಗಳು ಹೋರಾಟ ಮಾಡುತ್ತ ನ್ಯಾಯಕ್ಕಾಗಿ ಪರದಾಡುವ ಸ್ಥಿತಿ ಇತ್ತು, ಆದರೆ ರಾಜ್ಯ ಸರ್ಕಾರ ಸೆ.3ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವ ಎಚ್.ಕೆ. ಪಾಟೀಲ, ಆರ್. ಬಿ. ತಿಮ್ಮಾಪುರ ಅವರು ಈ ಭಾಗದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮುಳುಗಡೆ ಹೋರಾಟ ಸಮಿತಿ ಮುಖಂಡರನ್ನು ಕರೆದು ವಿಶೇಷ ಸಭೆ ಮಾಡಿ ಪರಿಹಾರ ಕುರಿತು ಚರ್ಚೆ ಮಾಡಿದ್ದರು’ ಎಂದರು.
ಸಭೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಮತ್ತು ಎಚ್.ಕೆ. ಪಾಟೀಲ ಅವರು, ಸಂತ್ರಸ್ತ ರೈತರ ಒಣಬೇಸಾಯ ಪ್ರತಿ ಎಕರೆ ಜಮೀನಿಗೆ ₹40 ಲಕ್ಷ ಮತ್ತು ನೀರಾವರಿ ಪ್ರತಿ ಎಕರೆಗೆ ₹50 ಲಕ್ಷ ಪರಿಹಾರ ನೀಡಬೇಕು ಎಂದು ಸಭೆಯಲ್ಲಿ ತಿಳಿಸಿದ್ದಾರೆ. ನಾನು ಮಾತನಾಡಿ ರಾಜ್ಯದ ಅಭಿವೃದ್ಧಿ ಹಿತದೃಷ್ಟಿಯಿಂದ ಈ ಯೋಜನೆ ಬೇಗನೆ ಮುಕ್ತಾಯ ಮಾಡಬೇಕು. ಒಣಬೇಸಾಯ ಎಕರೆಗೆ ₹30 ಲಕ್ಷ ಮತ್ತು ನೀರಾವರಿ ಪ್ರತಿ ಎಕರೆಗೆ ₹45 ಲಕ್ಷ ಪರಿಹಾರ ಘೋಷಣೆ ಮಾಡುವಂತೆ ತಿಳಿಸಿದ್ದೇನೆ’ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲಯ್ಯ ಕಂಬಿ, ಹಣಮಂತ ಕಾಖಂಡಕಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಈರಯ್ಯ ಗೋಠೆ, ಅಶೋಕ ಜೋಶಿ, ಶಿವಾನಂದ ಮಾದರ, ಕಾಶಿಂ ನಧಾಫ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.