ADVERTISEMENT

ರಾಂಪುರ | ಬೆಲೆ ಸಿಗದೇ ಮಣ್ಣಾಗುತ್ತಿದೆ ಈರುಳ್ಳಿ !

ಬೆಳೆಗಾರರು ಹೊಲದಲ್ಲಿಯೇ ಗಳೆ ಹೊಡೆದು ಮುಚ್ಚಿ ಹಾಕುತ್ತಿದ್ದಾರೆ

ಪ್ರಕಾಶ ಬಾಳಕ್ಕನವರ
Published 21 ಮೇ 2020, 19:45 IST
Last Updated 21 ಮೇ 2020, 19:45 IST
ಹಳ್ಳೂರ ಗ್ರಾಮದಲ್ಲಿ ರೈತರೊಬ್ಬರು ಬೆಳೆದ ಈರುಳ್ಳಿಯನ್ನು ಚೀಲದಲ್ಲಿ ತುಂಬಿ ಹಾಗೆಯೇ ಬಿಟ್ಟಿದ್ದು, ಕೊಳೆತು ನಾರುತ್ತಿವೆ
ಹಳ್ಳೂರ ಗ್ರಾಮದಲ್ಲಿ ರೈತರೊಬ್ಬರು ಬೆಳೆದ ಈರುಳ್ಳಿಯನ್ನು ಚೀಲದಲ್ಲಿ ತುಂಬಿ ಹಾಗೆಯೇ ಬಿಟ್ಟಿದ್ದು, ಕೊಳೆತು ನಾರುತ್ತಿವೆ   

ರಾಂಪುರ (ಬಾಗಲಕೋಟೆ): ಕೋವಿಡ್–19 ಸೋಂಕು ತಂದಿತ್ತ ಲಾಕ್‌ಡೌನ್ ಸಂಕಷ್ಟ ಹೋಬಳಿಯ ಈರುಳ್ಳಿ ಬೆಳೆಗಾರರ ಜಂಘಾಬಲವನ್ನೇ ಉಡುಗಿಸಿದೆ. ಅಪಾರ ಹಣ ವೆಚ್ಚ ಮಾಡಿ ಬೆಳೆದ ಈರುಳ್ಳಿಯನ್ನು ಯಾರೂ ಕೇಳುವವರಿಲ್ಲದಂತಾಗಿದೆ.

ಹೀಗಾಗಿ ಹತಾಶರಾಗಿರುವ ರೈತರು ಕೊಯ್ಲು ಮಾಡದೇ ಹೊಲಗಳಲ್ಲಿಯೇ ನೇಗಿಲು ಹೊಡೆದು ಬೆಳೆ ಮಣ್ಣಿನಲ್ಲಿ ಮುಚ್ಚುತ್ತಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಕೊಳೆತ ಈರುಳ್ಳಿಗೂ ಭರ್ಜರಿ ಬೆಲೆ ಸಿಕ್ಕ ಕಾರಣ ರೈತರು ಬೇಸಿಗೆ ಬೆಳೆಯಾಗಿ ಈರುಳ್ಳಿ ಬಿತ್ತನೆ ಮಾಡಿದ್ದರು. ಆದರೆ ಬೆಳೆ ಬರುತ್ತಿದ್ದಂತೆಯೇ ಕೊರೊನಾ ಸೋಂಕಿನ ಹಾವಳಿ ಆರಂಭವಾಯಿತು. ಲಾಕ್ ಡೌನ್ ಕಾರಣ ಬೆಳೆದ ಈರುಳ್ಳಿಯನ್ನು ಮಾರಾಟ ಮಾಡಲು ಹರಸಾಹಸ ಪಡಬೇಕಾಯಿತು.

ADVERTISEMENT

ತರಕಾರಿ ಮಾರಾಟಕ್ಕೆ ಅನುಮತಿ ಸಿಕ್ಕರೂ ಈರುಳ್ಳಿ ಬೇರೆ ರಾಜ್ಯ ಹಾಗೂ ದೇಶಗಳಿಗೆ ಹೋಗಲು ಸಾಧ್ಯವಾಗದೇ ಅದಕ್ಕೆ ಬೆಲೆ ಇಲ್ಲದಂತಾಯಿತು. ಕೊರೊನಾ ಸೋಂಕು ಹರಡುವಿಕೆ ಪ್ರಾರಂಭಕ್ಕೆ ಮೊದಲು ಕ್ವಿಂಟಲ್ ₹2 ಸಾವಿರ ಇದ್ದ ಬೆಲೆ ನಂತರ ಕ್ವಿಂಟಲ್‌ಗೆ ₹500 ರಿಂದ 600ಕ್ಕೆ ಇಳಿಯಿತು. ಹಾಗೆಯೇ ದಿನಗಳೆದಂತೆ ಬೆಲೆ ಇನ್ನಷ್ಟು ಕುಸಿತ ಕಂಡು ಈಗ ₹100 ರಿಂದ ₹200ಕ್ಕೆ ತಲುಪಿದೆ.

ಬಾಗಲಕೋಟೆ ತಾಲ್ಲೂಕಿನ ಹಳ್ಳೂರ, ಭೈರಮಟ್ಟಿ, ಬೆನಕಟ್ಟಿ, ಬೇವೂರು, ಭಗವತಿ, ಕಿರಸೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರು ನೀರಾವರಿ ಆಶ್ರಯಿಸಿ ಈರುಳ್ಳಿ ಬೆಳೆದು ಬೆಲೆಯಿಲ್ಲದೇ ಕೈ ಸುಟ್ಟುಕೊಂಡಿದ್ದಾರೆ.

ಹಳ್ಳೂರಿನ ದಯಾನಂದ ಅಕ್ಕಿ, ಬೆನಕಟ್ಟಿಯ ಭೀಮನಗೌಡ ಕಿಲಬನೂರ 10 ಎಕರೆ ಜಮೀನಿನಲ್ಲಿ ಬೆಳೆದ ಈರುಳ್ಳಿ ಕಟಾವು ಮಾಡದೇ ನೇಗಿಲು ಹೊಡೆದು ಮುಚ್ಚಿಹಾಕಿದ್ದಾರೆ. ಕೊಯ್ಲು ಮಾಡಿದ ಬಹಳಷ್ಟು ರೈತರು ಮಾರುಕಟ್ಟೆಗೆ ಕಳುಹಿಸಿ ನಷ್ಟ ಅನುಭವಿಸಿದ್ದಾರೆ.

ಹಳ್ಳೂರಿನ ರೈತರೊಬ್ಬರು ₹21 ಸಾವಿರ ಬಾಡಿಗೆ ನೀಡಿ ಲಾರಿಯೊಂದರಲ್ಲಿ ಈರುಳ್ಳಿ ತುಂಬಿಕೊಂಡು ಬೆಂಗಳೂರು ಮಾರುಕಟ್ಟೆಗೆ ಹೋದರೆ ಅಲ್ಲಿ ಅವರಿಗೆ ₹300ಕ್ಕೆ ಮಾರಾಟವಾಯಿತು. ಇನ್ನೂ ಕೆಲವು ರೈತರು ಟಂ ಟಂ ಬಾಡಿಗೆ ಮಾಡಿಕೊಂಡು ಹಳ್ಳಿ ಹಳ್ಳಿ ಸುತ್ತಿ ₹100ರಿಂದ 200ಕ್ಕೆ ಪ್ಯಾಕೆಟ್ (50 ಕೆ.ಜಿ) ಮಾರಾಟ ಮಾಡುತ್ತಿದ್ದಾರೆ.

’ಸಸಿ ನೆಟ್ಟು, ಬೀಜ ಬಿತ್ತನೆ ಮಾಡಿ, ನಾಲ್ಕಾರು ಬಾರಿ ಕಳೆ ತೆಗೆದು ಎಕರೆಗೆ ₹30 ಸಾವಿರ ವೆಚ್ಚ ಮಾಡಿ ಬೆಳೆದಿದ್ದೇವೆ. ಈಗ ಕ್ವಿಂಟಲ್‌ಗೆ ನೂರಿನ್ನೂರು ರೂಪಾಯಿ ಬೆಲೆ ಸಿಕ್ಕರೆ ಅದ್ಹೇಗೆ ಲಾಭ ಪಡೆಯುವುದು‘ ಎಂದು ರೈತರು ಪ್ರಶ್ನಿಸುತ್ತಾರೆ.

*
ಕ್ವಿಂಟಲ್‌ಗೆ ₹200 ಬೆಲೆ ಸಿಗುತ್ತದೆ ಎನ್ನುವುದಾದರೆ ಈರುಳ್ಳಿ ಕಟಾವು ಮಾಡಿ ಮಾರಾಟ ಮಾಡುವುದರಲ್ಲಿ ಯಾವುದೇ ಲಾಭವಿಲ್ಲ. ಹೀಗಾಗಿ 10 ಎಕರೆ ಫಸಲು ನೇಗಿಲು ಹೊಡೆದು ಮುಚ್ಚಿಹಾಕಿದ್ದೇನೆ.
-ಭೀಮನಗೌಡ ಕಿಲಬನೂರ, ಬೆನಕಟ್ಟಿ ರೈತ

*
ಬೇಸಿಗೆಗೆ ಉತ್ತಮ ಫಸಲು ಬಂದು ಒಳ್ಳೆಯ ದರ ಸಿಗಬಹುದು ಎಂಬ ನಿರೀಕ್ಷೆ ಇಟ್ಟು ದೂರದ ಊರಿನಿಂದ ಸಸಿ ತಂದು ನಾಟಿ ಮಾಡಿದ್ದೇನು. ಉತ್ತಮ ಬೆಳೆಯೇನೋ ಬಂತು ಆದರೆ ಬೆಲೆ ಸಿಗಲಿಲ್ಲ.
-ಮುತ್ತು ಗದ್ದನಕೇರಿ, ಹಳ್ಳೂರಿನ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.