ಮಹಾಲಿಂಗಪುರ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಜಾನುವಾರು ಮಾರುಕಟ್ಟೆ ಪ್ರಾಂಗಣ ವ್ಯಾಪ್ತಿಯಲ್ಲಿರುವ ಹಮಾಲರ ಕಾಲೊನಿಯಲ್ಲಿ ಪುರಸಭೆ ಸಿಬ್ಬಂದಿ ಭಾನುವಾರ ಕಸ ಸಂಗ್ರಹಿಸಿದರು.
ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ನಿರ್ದೇಶನದಂತೆ ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ.ಮುಗಳಖೋಡ ಅವರು, ಹಮಾಲರ ಕಾಲೊನಿಯಲ್ಲಿ ಸ್ವಚ್ಛತೆ ಕೈಗೊಳ್ಳಲು ಸಿಬ್ಬಂದಿಗೆ ಸೂಚಿಸಿದರು.
ತ್ಯಾಜ್ಯ ವಿಲೇವಾರಿ ವಾಹನದ ಮೂಲಕ ಮನೆಮನೆಗೆ ತೆರಳಿ ಕಸ ಸಂಗ್ರಹಿಸಿದ ಪುರಸಭೆ ಸಿಬ್ಬಂದಿ, ‘ವಾಹನ ಬಂದಾಗ ಅದರಲ್ಲಿ ಒಣ ಕಸ, ಹಸಿ ಕಸ ಬೇರ್ಪಡಿಸಿ ಹಾಕುವಂತೆ ಹಾಗೂ ಕಸ ಹೊರಗೆ ಚೆಲ್ಲಬಾರದು’ ಎಂದು ತಾಕೀತು ಮಾಡಿದರು.
ಕಾಲೊನಿ ಕಾಂಪೌಂಡ್ಗೆ ಅಂಟಿಕೊಂಡಿರುವ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ನಿವಾಸಿಗಳು ಚೆಲ್ಲಿದ್ದ ಕಸವನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು.
‘ಪಟ್ಟಣದ ಇತರೆ ಬಡಾವಣೆಯಂತೆ ಹಮಾಲರ ಕಾಲೊನಿಯಲ್ಲಿಯೂ ತ್ಯಾಜ್ಯ ವಿಲೇವಾರಿ ವಾಹನ ಸಂಚರಿಸಿ ಕಸ ಸಂಗ್ರಹಿಸಲಿದೆ. ವಿಶೇಷ ಅನುದಾನದಲ್ಲಿ ಕಾಲೊನಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು’ ಎಂದು ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹೇಳಿದರು.
ಈ ಕುರಿತು ಮಾರ್ಚ್ 23ರಂದು ‘ಪ್ರಜಾವಾಣಿ’ಯಲ್ಲಿ ‘ಸೌಲಭ್ಯ ವಂಚಿತ ಹಮಾಲರ ಕಾಲೊನಿ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.