
ಕೆರೂರ: ಕಳಪೆ ಗುಣಮಟ್ಟದ ಮೆಕ್ಕೆಜೋಳ ಎಂದು ಖರೀದಿ ಕೇಂದ್ರ ಸ್ಥಗಿತಗೊಳಿಸಿದ್ದರಿಂದ ರೈತರು ಖರೀದಿ ಕೇಂದ್ರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ಪಟ್ಟಣದಲ್ಲಿ ನಡೆದಿದೆ.
ಸರ್ಕಾರದ ಆದೇಶದಂತೆ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಕೇಂದ್ರದಲ್ಲಿ ಮೆಕ್ಕೆಜೋಳ ಖರೀದಿ ವಾರದ ಹಿಂದೆ ಪ್ರಾರಂಭವಾಗಿದ್ದು,ಇಂದು ಖರೀದಿ ಕೇಂದ್ರಕ್ಕೆ ಬಂದಂತಹ ರೈತರಿಗೆ ಮೆಕ್ಕೆಜೋಳ ಗುಣಮಟ್ಟದ್ದು ಇಲ್ಲ ಎಂದು ಸ್ಥಗಿತಗೊಳಿಸಿದರು. ಇದರಿಂದ ರೈತರು ಅಕ್ರೋಶ ಹೋರಹಾಕಿದರು.
’ಖರೀದಿ ಪ್ರಾರಂಭವಾಗಿ ಒಂದು ವಾರ ಕಳೆದರೂ ಕೂಡಾ ಇಲ್ಲಿಯವರೆಗೆ 50 ರೈತರಿಂದ ಮಾತ್ರ ಖರೀದಿ ಮಾಡಲಾಗಿದೆ. ಒಟ್ಟು 1200 ರೈತರು ನೋಂದಣಿ ಮಾಡಿಸಿದ್ದಾರೆ. ದಿನಕ್ಕೆ 10 ರಿಂದ 15 ಜನರಿಂದ ಮಾತ್ರ ಖರೀದಿ ಮಾಡುತ್ತಿದ್ದಾರೆ. ಈಗ ಏಕಾಏಕಿ ಗುಣಮಟ್ಟದ ನೆಪವೊಡ್ಡಿ ಖರೀದಿ ಸ್ಥಗಿತಗೊಳಿಸಿದ್ದಾರೆ. ಹೀಗಾದರೆ ನಾವು ದಿನ್ಯನಿತ್ಯ ಚಳಿಯಲ್ಲಿ ರಾಶಿಯನ್ನು ಹೋಲದಲ್ಲಿ ಕಾಯುವುದು ಹೇಗೆ? ಕಿಡಿಗೆಡಿಗಳು ರಾಶಿಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ನಮ್ಮ ಬೆಳೆಗಳಿಗೆ ಯಾರು ಹೊಣೆ’ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.
ಸ್ಥಳಕ್ಕೆ ಬಾಗಲಕೋಟ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯ ಸಹಾಯಕ ನಿರ್ದೇಶಕ ವ್ಹಿ.ಡಿ.ಪಾಟೀಲ ಆಗಮಿಸಿ, ’ರೈತರೊಂದಿಗೆ ಚರ್ಚಿಸಿ ಸರ್ಕಾರದ ಆದೇಶ ಪ್ರಕಾರ ನಾವು ಮೆಕ್ಕೆಜೋಳ ಖರೀದಿ ಮಾಡುತ್ತಿದ್ದೇವೆ. ಮೆಕ್ಕೆಜೋಳ 14 % ತೇವಾಂಶ ಹಾಗೂ 5 % ಡ್ಯಾಮೇಜ ಇದ್ದರೆ ಮಾತ್ರ ಖರೀದಿಸಲು ಅವಕಾಶ ಇದೆ. ಮೆಕ್ಕೆಜೋಳ ಕಳಪೆ ಗುಣಮಟ್ಟದ ಇದ್ದರೆ ಫ್ಯಾಕ್ಟರಿಯವರು ತಿರಸ್ಕರಿಸುತ್ತಾರೆ. ಕಳಪೆ ಗುಣಮಟ್ಟದ ಮೆಕ್ಕೆಜೋಳ ಖರೀದಿಗೆ ಅವಕಾಶವಿಲ್ಲ ಎಂದು ಹೇಳಿ ರೈತರನ್ನು ಸಮಾಧಾನಗೊಳಿಸಿದರು.
ಬದಾಮಿ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ರವಿ ರಾಠೋಡ, ಉಪತಹಶೀಲ್ದಾರ್ ವಿರೇಶ ಬಡಿಗೇರ, ಕಂದಾಯ ನಿರೀಕ್ಷಕ ಆನಂದ ಭಾವಿಮಠ, ಖರೀದಿ ಕೇಂದ್ರದ ಮುಖ್ಯಸ್ಥ ಕುಮಾರ ಕನಕೇರಿಮಠ, ರೈತರಾದ ನೀಲಪ್ಪ ತೋಟಸಗೇರಿ, ಶರಣಪ್ಪ ರೊಳ್ಳಿ,ಶಿವುಕುಮಾರ ಸುತಗುಂಡಿ, ಜುಬೇರ ಬೆಪಾರಿ, ಇನ್ನು ಅನೇಕ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.