ರಬಕವಿ ಬನಹಟ್ಟಿ: ನಗರದ ಆರಾಧ್ಯ ದೈವರಾದ ಮಲ್ಲಿಕಾರ್ಜುನ ದೇವರ ಜಾತ್ರೆ ಸೋಮವಾರ ಸಂಭ್ರಮ ಸಡಗರದಿಂದ ನಡೆಯಿತು.
ಜಾತ್ರೆಯ ಅಂಗವಾಗಿ ರಾತ್ರಿ ರಥೋತ್ಸವ ನಡೆಯಿತು. ಬೃಹತ್ ರಥವನ್ನು ಬೃಹತ್ ಹೂ ಮಾಲೆ ಮತ್ತು ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಮಲ್ಲಿಕಾರ್ಜುನ ದೇವಸ್ಥಾನದಿಂದ ಪೂಜಿಸಿದ ಕಳಸವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಬಂದು ರಥದ ಮೇಲೆ ಪ್ರತಿಷ್ಠಾಪಿಸಲಾಯಿತು.
ಮಹಾಲಿಂಗಪುರದಿಂದ ಆಗಮಿಸಿದ ಮಹಾಲಿಂಗೇಶ್ವರರ ಪಲ್ಲಕ್ಕಿ ಸೇವೆ ಕೃಷ್ಣಾ ನದಿಯಲ್ಲಿ ಪವಿತ್ರ ಸ್ನಾನ ಮುಗಿಸಿಕೊಂಡು ಬಂದ ನಂತರ ರಥದಲ್ಲಿ ಮಹಾಲಿಂಗೇಶ್ವರ ಮತ್ತು ಮಲ್ಲಿಕಾರ್ಜುನ ದೇವರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ ನಂತರ ನೂರಾರು ಜನರ ಹರ ಹರ ಮಹಾದೇವ, ಮಲ್ಲಿಕಾರ್ಜುನ ಮಹಾರಾಜ ಕೀ ಜೈ ಎಂಬ ಘೋಷಣೆಗಳ ಜೊತೆಗೆ ರಥೋತ್ಸವ ನಡೆಯಿತು.
ಭಕ್ತರು ರಥಕ್ಕೆ ಬೆಂಡು, ಬೆತ್ತಾಸು, ಬಾಳೆ ಹಣ್ಣು,ಟೆಂಗಿನಕಾಯಿಗಳನ್ನು ಹಾರಿಸಿದರು.
ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಸಿದ್ದು ಸವದಿ, ದಿ. ದೇವರಾಜು ಅರಸು ಹಿಂದುಳಿದ ವರ್ಗ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ, ಸಂಗಮೇಶ ನಿರಾಣಿ, ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಾಲಚಂದ್ರ ಉಮದಿ, ಡಾ.ಪದ್ಮಜೀತ ನಾಡಗೌಡ ಪಾಟೀಲ, ಭೀಮಶಿ ಪಾಟೀಲ, ಮಾರುತಿ ನಾಯಕ, ಡಾ, ಸಂಗಮೇಶ ಹತಪಕಿ, ಡಾ.ರವಿ ಜಮಖಂಡಿ, ಶಿವಾನಂದ ಹೊಸಮನಿ ಭಾಗವಹಿಸಿದ್ದರು.
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಗೋಯಲ್, ಜಮಖಂಡಿ ಡಿವೈಎಸ್ಪಿ ಎಸ್. ಜಮೀರ ರೋಷನ್, ಸಿಪಿಐ ಸಂಜೀವ ಬಳೆಗಾರ, ಪಿಎಸ್ಐ ಶಾಂತಾ ಹಳ್ಳಿ, ಜಾತ್ರೆಗೆ ಸೂಕ್ತ ಬಂದೋಬಸ್ತ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.