
ಗುಳೇದಗುಡ್ಡ: ಜಾತ್ರೆ ಉತ್ಸವಗಳಲ್ಲಿ ಸರಳ ಸಾಮೂಹಿಕ ವಿವಾಹದಲ್ಲಿ ಸತಿಪತಿಗಳಾಗುವುದರಿಂದ ಮದುವೆ ವೆಚ್ಚವನ್ನು ಕಡಿಮೆ ಮಾಡಬಹುದು. ಇದರಿಂದ ಬದುಕಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಪಟ್ಟಣದ ಹರದೊಳ್ಳಿಯಲ್ಲಿ ಗ್ರಾಮದೇವತೆ ಮೂಕೇಶ್ವರಿ ದೇವಸ್ಥಾನ ಸಮೀತಿಯ ಅಶ್ರಯದಲ್ಲಿ ಬುಧವಾರ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ವಧುವರರಿಗೆ ಅಕ್ಷತೆ ಹಾಕಿ ಮಾತನಾಡಿದರು.
ಕಾಂಗ್ರೆಸ್ ಮುಖಂಡ ಮೂಕಪ್ಪ ಹೂನೂರ ಮಾತನಾಡಿ, ಮದುವೆಗೆ ಲಕ್ಷಗಟ್ಟಲೆ ಹಣ ಖರ್ಚು ಮಾಡುವ ಬದಲು ಇಂತಹ ಸಾಮೂಹಿಕ ವಿವಾಹದಲ್ಲಿ ಸರಳ ಮದುವೆ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಮಾದರಿಯಾಗಬೇಕು. ದಂಪತಿ ಸರಳ ಜೀವನ ನಡೆಸಬೇಕು. ಆಗ ಉತ್ತಮ ಸಾಂಸಾರಿಕ ಜೀವನ ಸಾಧ್ಯ ಎಂದು ಹೇಳಿದರು.
ಸಾಮೂಹಿಕ ವಿವಾಹದಲ್ಲಿ ಐದು ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮಾಜಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ಗೌಡರ,ಮೂಕೇಶ್ವರಿ ದೇವಸ್ಥಾನದ ಪೂಜಾರಿ ನೀಲಪ್ಪ ಗೌಡರ, ಶಿವಪ್ಪ ಶ್ಯಾವಿ, ಸಿದ್ದಪ್ಪ ಗೌಡರ, ರಾಮಣ್ಣ ಚಿಂಪಗೇರ, ಯಲಗುರ್ದಗೌಡ ಗೌಡರ, ಕಿರಣ ಸಲಕಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.