
ಸತೀಶ ಜಾರಕಿಹೊಳಿ
ಬಾಗಲಕೋಟೆ: ‘ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ದೆಹಲಿಗೆ ಹೋಗುವುದರಲ್ಲಿ ವಿಶೇಷ ಏನಿಲ್ಲ. ಪಕ್ಷ, ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗೆ ದೆಹಲಿಗೆ ಹೋಗುತ್ತಿರುತ್ತಾರೆ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಹೈಕಮಾಂಡ್ ತಮ್ಮ ಪರವಾಗಿದೆ ಎಂದು ಬಹಳ ಸಲ ಹೇಳಿದ್ದಾರೆ. ನಮಗೂ ಸಹ ಈ ಗೊಂದಲ ಮುಗಿಯಲಿ ಎನ್ನುವ ಆಶಾಭಾವನೆ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಮುಖ್ಯಮಂತ್ರಿ ಸ್ಥಾನ ಕುರಿತ ಚರ್ಚೆ ಇಲ್ಲಿಯೇ ಮುಗಿಯಲಿದೆ. ಇಲ್ಲದಿದ್ದರೆ, ಅಂತಿಮವಾಗಿ ಹೈಕಮಾಂಡ್ ಹೇಳಬೇಕಾಗುತ್ತದೆ’ ಎಂದರು.
ಹೈಕಮಾಂಡ್ ಮುಖ್ಯಮಂತ್ರಿ ಪರವಾಗಿದ್ದರೆ ಡಿಸಿಎಂ ದೆಹಲಿಗೆ ಹೋಗುವುದು ವ್ಯರ್ಥ ಪ್ರಯತ್ನವೇ ಎಂಬ ಪ್ರಶ್ನೆಗೆ, ‘ಈ ಬಗ್ಗೆ ನಾವೇನೂ ಹೇಳಲ್ಲ. ನಾವು ಅವರ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ತಟಸ್ಥವಾಗಿದ್ದೇವೆ’ ಎಂದು ಮಾರ್ಮಿಕವಾಗಿ ಹೇಳಿದರು.
‘ಸಚಿವ ಸ್ಥಾನದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಕೆ.ಎನ್. ರಾಜಣ್ಣ ಅವರು, ರಾಹುಲ್ಗಾಂಧಿ ಅವರಿಗೆ ಪತ್ರ ಬರೆದು ತಮ್ಮ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ. ಪರಿಸ್ಥಿತಿಯನ್ನು ಹೈಕಮಾಂಡ್ಗೆ ವಿವರಿಸುವ ಬಗ್ಗೆ ಚರ್ಚೆ ಮಾಡಲಾಗಿತ್ತು. ಅದನ್ನೇ ಅವರು ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ರಾಜಣ್ಣ ಅವರನ್ನು ಭೇಟಿಯಾಗುವುದರಲ್ಲಿ ತಪ್ಪೇನಿದೆ? ಇಬ್ಬರೂ ಒಂದೇ ಪಕ್ಷ. ರಾಜಕೀಯದಲ್ಲಿ ಕೋಲ್ಡ್ ವಾರ್ ಇದ್ದೇ ಇರುತ್ತದೆ’ ಎಂದರು.
‘ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯೇ ಆಗಿಲ್ಲ. ಅದು ಚರ್ಚೆಗೆ ಬಂದಾಗ ಏನು ಎಂದು ಹೇಳುತ್ತೇನೆ’ ಎಂದು ತಿಳಿಸಿದರು.
‘ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರಿಗೆ ಹಂತ, ಹಂತವಾಗಿ ಬಾಕಿ ಬಿಲ್ ಪಾವತಿ ಮಾಡಲಾಗುತ್ತಿದೆ. ಹಾಗೆಯೇ ಹೊಸ ಬಿಲ್ಗಳು ಬರುತ್ತಿರುತ್ತವೆ. ಕಾಮಗಾರಿ ಮಾಡಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.