ಮುಧೋಳ: ‘ಬ್ರಿಟಿಷರು ಒಡೆದು ಆಳುವ ನೀತಿಯಿಂದ ಮುಸ್ಲಿಮರನ್ನು ಎತ್ತಿಕಟ್ಟಿದರು. ಅಂದಿನಿಂದ ಇಂದಿನವರೆಗೂ ಮುಸ್ಲಿಂ ತುಷ್ಟೀಕರಣ ನಡೆದಿರುವುದು ದುರ್ದೈವ. ಇದರಿಂದ ದೇಶ ಇಬ್ಭಾಗವಾಯಿತು. ಆದರೂ ಇಂದಿನ ರಾಜಕಾರಣಿಗಳು ಮತ್ತೆ ತುಷ್ಟಿಕರಣಕ್ಕೆ ಮುಂದಾಗಿದ್ದಾರೆ’ ಎಂದು ಆರ್ಎಸ್ಎಸ್ ಪ್ರಾಂತ ಸಹ ಪ್ರಚಾರಕ ಶ್ರೀನಿವಾಸ ನಾಯಕ ಬೇಸರ ವ್ಯಕ್ತ ಪಡಿಸಿದರು.
ನಗರದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ವಿಜಯ ದಶಮಿ ಹಬ್ಬ ಹಾಗೂ ಸಂಘಟನೆಯ ಶತಾಬ್ದಿ ಅಂಗವಾಗಿ ನಡೆದ ಪಥಸಂಚಲನದ ನಂತರ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.
‘ತನ್ನದೇ ಆದ ಸಿದ್ಧಾಂತದೊಂದಿಗೆ ಸೇವೆ ಮಾಡುತ್ತಿರುವ ಸಂಘವು ದೇಶದ ಪರಂಪರೆ, ಸಂಸ್ಕೃತಿ, ಅಖಂಡತೆ– ಅಸ್ಮಿತೆಗಾಗಿ ಶ್ರಮಿಸುತ್ತಿದೆ. ಸಂಘದ ವೃದ್ಧಿಯನ್ನು ಅರಗಿಸಿಕೊಳ್ಳಲಾಗದ ಕೆಲವರು ಸಂಘದ ಶಕ್ತಿ ಅಡಗಿಸಲು ಹಲವು ಕುತಂತ್ರಗಳನ್ನು ಹೂಡಿದರು. 1975ರಲ್ಲಿನ ತುರ್ತು ಪರಿಸ್ಥತಿ ವೇಳೆ 70 ಸಾವಿರ ಸ್ವಯಂ ಸೇವಕರನ್ನು ಜೈಲಿಗೆ ಕಳುಹಿಸಿ ಸಂಘದ ನಿರ್ನಾಮಕ್ಕೆ ಮುಂದಾದರೂ ಯಾವುದೇ ಪ್ರಯೋಜನವಾಗಲಿಲ್ಲ’ ಎಂದು ಹೇಳಿದರು.
‘ಹಲವು ಹಲವು ಪಿಡುಗುಗಳಿಂದ ನಮ್ಮ ಧರ್ಮ ಅಪಾಯದತ್ತ ಸರಿಯುತ್ತಿದೆ. ಇದರಿಂದ ಹಿಂದೂ ಸಮಾಜವು ಎಚ್ಚೆತ್ತುಕೊಳ್ಳಬೇಕು. ಸಮಾಜ ಒಡೆಯಲು ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ’ ಎಂದು ಹೇಳಿದರು.
ಪಥಸಂಚಲನಗಳು ಆರ್.ಎಂ.ಜಿ ಕಾಲೇಜ್ನಿಂದ ಆರಂಭವಾಗಿ ಅಂಬೇಡ್ಕರ್ ವೃತ್ತದಲ್ಲಿ ಬೇರೆ ಬೇರೆ ಮಾರ್ಗಗಳಲ್ಲಿ ತೆರಳಿ ಗಾಂಧಿ ವೃತ್ತದಲ್ಲಿ ಮತ್ತೆ ಸೇರಿದವು.
ದಾರಿಯುದ್ದಕ್ಕೂ ಕೇಸರಿ ಬಣ್ಣದ ಪರಪರೆ, ರಂಗೋಲಿ ಸಿಂಗಾರ ಮಾಡಲಾಗಿತ್ತು. ಪ್ರಮುಖ ಸ್ಥಳಗಳಲ್ಲಿ ಮಕ್ಕಳಿಗೆ ಮಹಾಪುರುಷರ ವೇಷ ಭೂಷಣ ಹಾಕಲಾಗಿತ್ತು. ಆರ್ಎಂಜಿ ಕಾಲೇಜ್ ಮದಾನದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಿರಿಯ ವ್ಯಾಪಾರಿ ಸಂಗಪ್ಪ ಅಂಗಡಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.