ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರದಲ್ಲಿ ನಡೆದ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಜಿಲ್ಲಾ ಆರೋಗ್ಯ ಅಧಿಕಾರಿ (ಡಿಎಚ್ಓ) ಡಾ.ರಾಜಕುಮಾರ ಯರಗಲ್ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಬಿ.ಪಟ್ಟಣಶೆಟ್ಟಿ ಅಮಾನತುಗೊಂಡಿದ್ದಾರೆ.
ಮಹಾಲಿಂಗಪುರದಲ್ಲಿ ಕಳೆದ ಮೇ 27 ರಂದು ಕೊಲ್ಲಾಪುರ ಜಿಲ್ಲೆಯ ಸೋನಾಲಿ ಕದಂ ಎಂಬ ಮಹಿಳೆಯ ಭ್ರೂಣ ಗರ್ಭಪಾತ ಮಾಡಿದ್ದು, ಆ ದಿನದಂದೇ ಅವರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಡಾ.ಯರಗಲ್ ಹಾಗೂ ಡಾ.ಪಟ್ಟಣಶೆಟ್ಟಿ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಇಲಾಖಾ ವಿಚಾರಣೆ ಬಾಕಿಯಿಟ್ಟು ಕರ್ನಾಟಕ ನಾಗರಿಕ ಸೇವಾ ನಿಯಮಗಳನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯು ಇಬ್ಬರನ್ನೂ ಅಮಾನತುಗೊಳಿಸಿ ಅದೇಶ ಹೊರಡಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮಖಂಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಿ.ಎಸ್.ಗಲಗಲಿ ಮತ್ತು ಮಹಾಲಿಂಗಪುರ ಸಮುದಾಯ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಅಮೋಜವ್ವ ಬಿದರಿ ಅವರನ್ನು ಪ್ರಸ್ತುತ ಹುದ್ದೆಯಿಂದ ವರ್ಗಾಯಿಸಿ ಅವರ ಸೇವೆಯನ್ನು ಕೂಡಲೇ ಹಿಂಪಡೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.