ಸಚಿವ ಆರ್.ಬಿ. ತಿಮ್ಮಾಪುರ
ಬಾಗಲಕೋಟೆ: ‘ಪಹಲ್ಗಾಮ್ನಲ್ಲಿ ದಾಳಿ ಮಾಡುವವನು ಧರ್ಮ ಕೇಳುತ್ತಾ ಕೂಡಲಿಕ್ಕೆ ಆಗುತ್ತದೆಯೇ? ಕೇಳಿರಲಿಕ್ಕಿಲ್ಲ ಎಂಬ ಭಾವನೆ ನನ್ನದು. ಕೇಳಿದ್ದರೂ, ಧರ್ಮದ ಹೆಸರಿನಲ್ಲಿ ಎಲ್ಲರಿಗೂ ಜೋಡಿಸುವುದು ಸರಿಯಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೇಹುಗಾರಿಕೆ ವೈಫಲ್ಯ ಮುಚ್ಚಿಸಲು ಹಿಂದೂ–ಮುಸ್ಲಿಂ ಬಣ್ಣ ಕಟ್ಟುವುದು. ಚುನಾವಣೆ ದೃಷ್ಟಿಯಿಂದ ನೋಡುವುದು ಸರಿಯಲ್ಲ’ ಎಂದರು.
‘ಕಾರ್ಗಿಲ್, ಪುಲ್ವಾಮ, ಪಹಲ್ಗಾಮ್ ದಾಳಿ ನೋಡಿದರೆ ಕೇಂದ್ರದ ಬೇಹುಗಾರಿಕೆ ವೈಫಲ್ಯ ಗೊತ್ತಾಗುತ್ತದೆ. ಸತ್ತವರ ಹೆಸರಿನಲ್ಲಿ ಲಾಭ ತೆಗೆದುಕೊಳ್ಳುವುದೇ ಬಿಜೆಪಿಯವರ ಧ್ಯೇಯವಾಗಿದೆ. ದೇಶ ಗಂಡಾಂತರದಲ್ಲಿದ್ದಾಗ್ಯೂ ರಾಜಕೀಯ ಮಾಡಲಾಗುತ್ತದೆ’ ಎಂದು ಟೀಕಿಸಿದರು.
‘ಜಾತಿ ಗಣತಿ ಬಗ್ಗೆ ಇರುವ ಗೊಂದಲಗಳನ್ನು ಸರಿಪಡಿಸಲಾಗುವುದು. ಯಾರಿಗೂ ಅನ್ಯಾಯವಾಗದಂತೆ ಕ್ರಮಕೈಗೊಳ್ಳಲಾಗುವುದು. ವರದಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿರುವಾಗಲೇ ಅನ್ಯಾಯ ಆಗಿದೆ ಎಂಬಂತೆ ಬಿಜೆಪಿಯವರು ಬಿಂಬಿಸುತ್ತಿರುವುದು ಸರಿಯಲ್ಲ’ ಎಂದರು.
‘ಒಳಮೀಸಲಾತಿ ವಿಳಂಬವಾಗಿದೆ ಎಂದು ಪ್ರಶ್ನಿಸುವ ಬಿಜೆಪಿಯವರು, ಅಧಿಕಾರದಲ್ಲಿರುವಾಗ ಯಾಕೆ ಜಾರಿಗೆ ತರಲಿಲ್ಲ. ಜನರಿಗೆ ಮೋಸ ಮಾಡುತ್ತಲೇ ಬಂದಿದ್ದಾರೆ. ಅವೈಜ್ಞಾನಿಕವಾಗಿ ಚುನಾವಣೆಗೆ ಮುನ್ನ ಘೋಷಿಸಿ ಹೋದರು. ಸುಳ್ಳು ಹೇಳುವುದೇ ಬಿಜೆಪಿ ಸಾಧನೆಯಾಗಿದೆ’ ಎಂದು ವಾಗ್ದಾಳಿ ನಡೆಸಿದರು.
‘ಕೇಂದ್ರ ಸರ್ಕಾರ ಸಕ್ಕರೆ ಮಾರಾಟಕ್ಕೆ ಅವಕಾಶ ನೀಡಬೇಕು. ರಾಜ್ಯ ಸರ್ಕಾರ ವಿದ್ಯುತ್ ಹಣ ಪಾವತಿ ಮಾಡಿರುವುದು ಬಾಕಿ ಉಳಿಸಿಕೊಂಡಿರುವ ಬಗ್ಗೆ ಪರಿಶೀಲಿಸಲಾಗುವುದು. ರೈತರಿಗೆ ಶೀಘ್ರ ಹಣ ಪಾವತಿಗೆ ಕ್ರಮಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.