ಬಾಗಲಕೋಟೆ: ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೊದಲಿನಂತೆ ಮಂಡಲ ಹಾಗೂ ಜಿಲ್ಲಾ ಪಂಚಾಯ್ತಿ ಯ ಎರಡು ಹಂತದ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದ ಶಿವಾನುಭವ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ನೂತನ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಅಭಿನಂದನೆ ಹಾಗೂ ಬಿಜೆಪಿಯ ಜನಸೇವಕ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೊದಲು ಇದ್ದ ಎರಡು ಹಂತದ ವ್ಯವಸ್ಥೆ ಉತ್ತಮವಾಗಿತ್ತು. ವೀರಪ್ಪ ಮೊಯಿಲಿ ಎಂಬ ವಿವೇಚನೆ ಇಲ್ಲದ ನಾಯಕ ಬಂದು ಅದನ್ನು ಹಾಳು ಮಾಡಿ ಮೂರು ಹಂತದ ವ್ಯವಸ್ಥೆ ಜಾರಿ ಮಾಡಿದ್ದರು. ಈಗ ತಾಲ್ಲೂಕು ಪಂಚಾಯ್ತಿಗೆ ಅಧಿಕಾರವೂ ಇಲ್ಲ. ಅನುದಾನವೂ ಇಲ್ಲ. ಹೀಗಾಗಿ ಕೆಲಸ ಕೂಡ ಇಲ್ಲವಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮತ್ತೆ ಬಲಪಡಿಸಲು ಮತ್ತೆ ಮೊದಲಿನಂತೆ ಎರಡು ಹಂತದ ವ್ಯವಸ್ಥೆ ಜಾರಿಗೆ ತರಲು ಯೋಚಿಸಲಾಗಿದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲೂ ಗಂಭೀರ ಚರ್ಚೆ ನಡೆದಿದೆ ಎಂದರು.
ಸಮಾರಂಭ ಉದ್ಘಾಟಿಸಿದ ವಸತಿ ಸಚಿವ ವಿ.ಸೋಮಣ್ಣ, 'ಹಿಂದಿನ ಸರ್ಕಾರಗಳ ಅವಧಿಯಲ್ಲಿ ವಸತಿ ಯೋಜನೆಗಳಲ್ಲಿ ಯಂಕ, ನಾಣಿ, ಸೀನ ಎಂದೆಲ್ಲಾ ಫಲಾನುಭವಿಗಳ ಹೆಸರು ಬರೆದು ಒಂದೇ ನಿವೇಶನದ ಮೇಲೆ ಹತ್ತಾರು ಬಾರಿ ಹಣ ಹೊಡೆದಿದ್ದಾರೆ. ಹೀಗಾಗಿ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಮನೆಗಳ ಹಂಚಿಕೆ ವಿಚಾರದಲ್ಲಿ ನೂತನ ಸದಸ್ಯರು ಎಚ್ಚರಿಕೆ ವಹಿಸಬೇಕು' ಎಂದು ಸಲಹೆ ನೀಡಿದರು.
ಪ್ರತಿ ಗ್ರಾಮ ಪಂಚಾಯ್ತಿಗೆ 20ರಂತೆ ಐದು ವರ್ಷಗಳಲ್ಲಿ 100 ಮನೆಗಳ ಹಂಚಿಕೆ ಮಾಡಲಾಗುವುದು. ಅವುಗಳನ್ನು ಅರ್ಹರಿಗೆ ಹಂಚಿಕೆ ಮಾಡಲು ಶ್ರಮಿಸುವಂತೆ ಸೋಮಣ್ಣ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.