
ರಬಕವಿ–ಬನಹಟ್ಟಿ: ‘ವಿದ್ಯಾರ್ಥಿಗಳು ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆದುಕೊಂಡರೆ ಉತ್ತಮ ಸಾಧನೆ ಮಾಡಬಲ್ಲರು. ಇಂದಿನ ದಿನಗಳಲ್ಲಿ ನಾವು ಬದಲಾವಣೆಗೆ ಹೊಂದಿಕೊಳ್ಳುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಆ ನಿಟ್ಟಿನಲ್ಲಿ ನಾವು ಜ್ಞಾನವನ್ನು ಪಡೆದುಕೊಳ್ಳಬೇಕು’ ಎಂದು ಜನತಾ ಶಿಕ್ಷಣ ಸಂಘದ ಆಡಳಿತ ಮಂಡಳಿಯ ಸದಸ್ಯ ಡಾ. ಪಂಡಿತ ಪಟ್ಟಣ ತಿಳಿಸಿದರು.
ಅವರು ಸೋಮವಾರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದ ಗೌರವ ಕಾರ್ಯದರ್ಶಿ ಶಂಕರ ಸೋರಗಾವಿ ಮಾತನಾಡಿ, ‘ವಿದ್ಯಾರ್ಥಿಗಳು ತಾವು ಕಲಿತ ಶಾಲೆ ಮತ್ತು ಶಿಕ್ಷಕರ ಮೇಲೆ ವಿಶ್ವಾಸವನ್ನು ಹೊಂದಿರಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.
ರಾಜ್ಯಕ್ಕೆ ಮೂರನೆಯ, ಜಿಲ್ಲೆಗೆ ದ್ವಿತೀಯ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡ ಲಕ್ಷ್ಮಿ ಹೆರಕಲ್, ರಾಜ್ಯಕ್ಕೆ ನಾಲ್ಕನೆಯ ಸ್ಥಾನ, ಜಿಲ್ಲೆಗೆ ಮೂರನೆ, ತಾಲ್ಲೂಕಿಗೆ ದ್ವಿತೀಯ ಸ್ಥಾನ ಪಡೆದ ಅನನ್ಯಾ ನಂದ್ಯಾಳ ಮತ್ತು ಬಸವರಾಜ ಧೂಪದಾಳ ಅವರನ್ನು ಸನ್ಮಾನಿಸಲಾಯಿತು.
ಸಂಘದ ಸದಸ್ಯರಾದ ಭೀಮಸಿ ಮಗದುಮ್, ಎಂ.ಜಿ.ಕೆರೂರ ಮತ್ತು ಉಪ ಪ್ರಾಚಾರ್ಯೆ ಎನ್.ಎಸ್.ಕಂಕಣಮೇಲಿ ಮಾತನಾಡಿದರು. ಆಡಳಿತ ಮಂಡಳಿಯ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸುಭಾಸ ಭದ್ರನವರ, ಉಪಾಧ್ಯಕ್ಷ ಬಸವರಾಜ ಭದ್ರನವರ, ಕಾರ್ಯಧ್ಯಕ್ಷ ಬಸವಂತ ಜಾಡಗೌಡ, ಶಿಕ್ಷಕರಾದ ರಾಜು ಉಕ್ಕಲಿ, ಎಸ್.ಎಂ. ತೇಲಿ, ಬಿ.ಜೆ.ಜೋರಾಪುರ, ಎಂ.ಬಿ.ಶೆಟ್ಟಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.