
ರಬಕವಿ ಬನಹಟ್ಟಿ: ‘ಗ್ರಾಮೀಣ ಪ್ರದೇಶದಲ್ಲಿರುವ ಕುಸ್ತಿ ಪಟುಗಳು ರಾಷ್ಟ್ರ ಮಟ್ಟದಲ್ಲೂ ಕೂಡಾ ಗಮನ ಸೆಳೆಯುವಂತಾಗಲಿ. ಮುಂದಿನ ದಿನಗಳಲ್ಲಿಯೂ ಕುಸ್ತಿ ಕ್ರೀಡೆಗೆ ಮತ್ತು ಪೈಲ್ವಾನರಿಗೆ ಇದೇ ರೀತಿಯಾಗಿ ಪ್ರೋತ್ಸಾಹಿಸಿ’ ಎಂದು ಕರ್ನಾಟಕ ರಾಜ್ಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬಿ. ಗುಣರಂಜನ ಶೆಟ್ಟಿ ತಿಳಿಸಿದರು.
ಇಲ್ಲಿನ ಕಾಡಸಿದ್ಧೇಶ್ವರ ದೇವಸ್ಥಾನದ ಕುಸ್ತಿ ಮೈದಾನದಲ್ಲಿ ಹಿರಿಯ ಕುಸ್ತಿ ಪಟು ಕಾಡಪ್ಪ ಜಿಡ್ಡಿಮನಿಯವರ 75ನೇ ಜನ್ಮದಿನದ ಅಂಗವಾಗಿ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ ನೇತೃತ್ವದಲ್ಲಿ ಭಾನುವಾರ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಮಾತನಾಡಿದರು.
ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ ಮಾತನಾಡಿ, ‘ಗ್ರಾಮೀಣ ಪ್ರದೇಶಲ್ಲಿರುವ ಪ್ರತಿಭಾವಂತ ಕುಸ್ತಿ ಪೈಲ್ವಾನರನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕು. ಇಂಥ ದೇಸಿ ಕ್ರೀಡಯನ್ನು ನಾವೆಲ್ಲರೂ ಪ್ರೋತ್ಸಾಹಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ಕುಸ್ತಿ ಉಳಿಯುತ್ತದೆ’ ಎಂದರು.
ಕುಸ್ತಿ ಪಂದ್ಯಾವಳಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಇನ್ನೀತರ ರಾಜ್ಯದ ಆಹ್ವಾನಿತ ಐವತ್ತಕ್ಕೂ ಹೆಚ್ಚು ಜೋಡಿಗಳು ಐದು ಗಂಟೆಗಳಿಗಿಂತ ಹೆಚ್ಚು ಕಾಲ ತಮ್ಮ ಕುಸ್ತಿ ಕಲೆಯನ್ನು ಪ್ರದರ್ಶನ ಮಾಡಿದರು.
ರಾಜೇಂದ್ರ ಭದ್ರನವರ ಮತ್ತು ಶ್ರೀನಿವಾಸ ಭದ್ರನವರ ಕುಸ್ತಿ ಮೈದಾನಕ್ಕೆ ಪೂಜೆ ಸಲ್ಲಿಸಿದರು.
ಶ್ರೀಶೈಲ ಧಬಾಡಿ, ರವಿ ಬಾಡಗಿ, ದಾನಪ್ಪ ಹುಲಜತ್ತಿ, ಎಸ್.ಬಿ.ಮಟೋಳ್ಳಿ, ಬಸವರಾಜ ಕೊಣ್ಣೂರ, ರಾಹುಲ ಕಲೂತಿ, ಡಾ.ಎ.ಆರ್. ಬೆಳಗಲಿ, ಬ್ರಿಜ್ಮೋಹನ ಡಾಗಾ, ಮಲ್ಲಿಕಾರ್ಜುನ ತುಂಗಳ, ರಾಜು ನಂದೆಪ್ಪನವರ, ರಮೇಶ ಜಿಡ್ಡಿಮನಿ, ದಾವಲಸಾಬ್ ಆಸಂಗಿ, ಮಹಾದೇವ ಹಳಿಂಗಳಿ, ಕಾಡಪ್ಪ ಮಹೀಷವಾಡಗಿ ಸೇರಿದಂತೆ ಅನೇಕರು ರಬಕವಿ,ಬನಹಟ್ಟಿ, ಜಮಖಂಡಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದ ಹತ್ತು ಸಾವಿರಕ್ಕೂ ಹೆಚ್ಚು ಜನ ಕುಸ್ತಿ ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.