
ರಬಕವಿ ಬನಹಟ್ಟಿ: ಆರೋಗ್ಯ ಇಲಾಖೆ ಸಿಬ್ಬಂದಿಯ ನ್ಯಾಯಯುತ ಬೇಡಿಕೆಗಳು ಈಡೇರದೇ ಇರುವುದರಿಂದ ಮಾರ್ಚ್ 11ರಿಂದ 15ರವರೆಗೆ ಕಪ್ಪು ಬಟ್ಟೆ ಧರಿಸಿ ಕೇವಲ ತುರ್ತು ಸೇವೆಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತೇವೆ. ಅಷ್ಟರ ಒಳಗಾಗಿ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದೆ ಇದ್ದರೆ 16ರಂದು ತುರ್ತು ಸೇವೆ ಸೇರಿದಂತೆ ಎಲ್ಲ ಸೇವೆಗಳನ್ನು ಬಂದ್ ಮಾಡಿ ಕರ್ತವ್ಯಕ್ಕೆ ಗೈರಾಗುತ್ತೇವೆ ಎಂದು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ತಾಲ್ಲೂಕು ಘಟಕದಅಧ್ಯಕ್ಷ ಮಹೇಶ ಬಾಗಲಕೋಟ ತಿಳಿಸಿದರು.
ಬುಧವಾರ ರಬಕವಿ ಬನಹಟ್ಟಿಯಲ್ಲಿ ಶಾಸಕ ಸಿದ್ದು ಸವದಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಹಲವಾರು ವರ್ಷಗಳಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ದೃಷ್ಠಿಯಿಂದ ಖಾಲಿ ಇರುವ ಹುದ್ದೆ ತುಂಬದೇ ಇರುವುದು, ರಾಜ್ಯದ ಎಲ್ಲ ಸರ್ಕಾರ ಆಸ್ಪತ್ರೆಗಳಲ್ಲಿ ಕಾಲ ಕಾಲಕ್ಕೆ ಸಮರ್ಪಕವಾಗಿ ಇಲಾಖೆಯಿಂದ ಔಷಧಿಗಳನ್ನು ಸರಬರಾಜು ಮಾಡದೆ ಇರುವುದು, ಇಲಾಖೆಯಲ್ಲಿ ಐದು ವರ್ಷಗಳಿಂದ ಯಾವುದೆ ಅಧಿಕಾರಿಗಳಿಗೆ ಮುಂಬಡ್ತಿಗಳನ್ನು ನೀಡದೆ ಇರುವುದು, ಇಲಾಖೆಯ ವರ್ಗಾವಣೆಯ ಕಾಯಿದೆಯಲ್ಲಿ ಹಲವಾರು ನ್ಯೂನತೆಗಳು ಸರಿಪಡಿಸದೆ ಅವೈಜ್ಞಾನಿಕ ಕೌನ್ಸಿಲಿಂಗ್ ವರ್ಗಾವಣೆ ಮಾಡಿರುವುದರಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ತೊಂದರೆಯಾಗಿದೆ. ಆದ್ದರಿಂದ ಸರ್ಕಾರ ಬೇಡಿಕೆಗಳನ್ನು ಪೂರೈಸದೆ ಹೋದರೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಅನಿರ್ದಾಷ್ಠವಧಿ ಮುಷ್ಕರವನ್ನು ಕೈಗೊಗಳ್ಳಲಿದ್ದಾರೆ ಎಂದು ಸಂಘದ ಗೌರವಾಧ್ಯಕ್ಷ ಪ್ರವೀಣ ರೆಡ್ಡಿ ತಿಳಿಸಿದರು.
ಶಾಸಕ ಸಿದ್ದು ಸವದಿ ಮನವಿ ಸ್ವೀಕರಿಸಿ ಮಾತನಾಡಿ, ಈ ಕುರಿತು ಸರ್ಕಾರದ ಮತ್ತು ಸಂಬಂಧಪಟ್ಟ ಸಚಿವರ ಗಮನ ಸೆಳೆಯಲಾಗುವುದು ಮತ್ತು ವಿಧಾನ ಸೌಧದಲ್ಲಿ ಚರ್ಚೆಗೆ ಅವಕಾಶವನ್ನು ಕೋರಲಾಗುವುದು ಎಂದರು. ಡಾ.ವಜ್ರಮಟ್ಟಿ, ಡಾ. ಕಾವೇರಿ ಹಳ್ಯಾಳ, ಸ್ಮಿತಾ ಕಾಳಗಿ, ಎಂ.ಬಿ.ಅಕ್ಕಿ, ಅಪ್ಪಾಜಿ ಹೂಗಾರ, ಪಟ್ಟಣಶೆಟ್ಟಿ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.